
ಬೆಳಗಾವಿ: ‘ಇಂದು ಭಾರತ ಬಲಾಢ್ಯ ರಾಷ್ಟ್ರವಾಗುತ್ತಿದೆ. ಆದರೆ, ಯುವಜನರು ಮೊಬೈಲ್ಗಳಿಗೆ ಗುಲಾಮರಾಗುತ್ತಿರುವ ಮನಸ್ಥಿತಿಯಿಂದ ಹೊರಬರಬೇಕಿದೆ’ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಇಲ್ಲಿನ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ‘ವ್ಯಕ್ತಿತ್ವ ನಿರ್ಮಾಣ’ ಕುರಿತು ಯುವ ಸಮ್ಮೇಳನದಲ್ಲಿ ‘ನವತಾರುಣ್ಯದ ಆಶಾಕಿರಣ ಸ್ವಾಮಿ ವಿವೇಕಾನಂದ’ ವಿಷಯವಾಗಿ ಅವರು ಉಪನ್ಯಾಸ ನೀಡಿದರು.
‘ವಿಶ್ವದ ನಾಲ್ಕನೇ ಪ್ರಬಲ ಆರ್ಥಿಕ ರಾಷ್ಟ್ರವಾಗಿ ಭಾರತ ಬೆಳೆದಿದೆ. ಇನ್ನೂ ಸಾಧನೆಪಥದತ್ತ ಸಾಗುತ್ತಿದೆ. ಆದರೆ, ಯುವಜನರು ಮೊಬೈಲ್ ಬಳಸುವುದರಲ್ಲೇ ಹೆಚ್ಚಿನ ಕಾಲಹರಣ ಮಾಡುತ್ತಿದ್ದಾರೆ. ಮೊಬೈಲ್ ಆಡಿಸಿದಂತೆ ಆಡುತ್ತಿದ್ದಾರೆ. ಈ ಮನಸ್ಥಿತಿಯಿಂದ ಅವರು ಹೊರಬರಬೇಕಾದರೆ, ವಿವೇಕಾನಂದರ ಆದರ್ಶಗಳನ್ನು ಕಲಿಸಿಕೊಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
‘ಆಂತರಿಕ ಸಾಮರ್ಥ್ಯದ ಅನ್ವೇಷಣೆ’ ವಿಷಯ ಕುರಿತು ಮಾತನಾಡಿದ ಕಾನ್ಫುರ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಶ್ರದ್ಧಾನಂದಜಿ, ‘ಬದುಕಿನಲ್ಲಿ ಎದುರಾಗುವ ಸೋಲು–ಗೆಲುವಿನ ಬಗ್ಗೆ ಚಿಂತಿಸದೆ ಸತತವಾಗಿ ಪರಿಶ್ರಮ ಪಡಬೇಕು. ಪ್ರಯತ್ನ ಎಂದೂ ಕೈಚೆಲ್ಲಬಾರದು. ನಮ್ಮೊಳಗೆ ಆತ್ಮವಿಶ್ವಾಸ ಗಟ್ಟಿಗೊಳಿಸಲು ನಮ್ಮ ಸಾಮರ್ಥ್ಯ ಅನ್ವೇಷಿಸಿ ಬಲಪಡಿಸಿಕೊಳ್ಳಬೇಕು’ ಎಂದು ಹೇಳಿದರು.
ಸ್ವಾಮಿ ಮೋಕ್ಷತ್ಮಾನಂದ ಅವರು, ‘ವ್ಯಕ್ತಿತ್ವ ನಿರ್ಮಾಣದಲ್ಲಿ ಧ್ಯಾನದ ಪ್ರಾಮುಖ್ಯತೆ ಮತ್ತು ಅಭ್ಯಾಸ ವಿಧಾನ’ ಕುರಿತು ಉಪನ್ಯಾಸ ನೀಡಿದರು.
ಬೆಳಗಾವಿ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದಜಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.