ADVERTISEMENT

ಅಕ್ರಮ ಫಿಲ್ಟರ್ ಮರಳು ತಯಾರಿಕೆ: ದಾಳಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಸೂಲಿಬೆಲೆ (ಹೊಸಕೋಟೆ): ತಾಲ್ಲೂಕಿನ ಎರಡು ಹೋಬಳಿಗಳಲ್ಲಿ ಅಕ್ರಮ ಫಿಲ್ಟರ್ ಮರಳು ತಯಾರಿಕೆ ಕೇಂದ್ರಗಳ ಮೇಲೆ ಶುಕ್ರವಾರ ಜಿಲ್ಲಾಡಳಿತದ ಐದು ತಂಡಗಳು ಏಕಕಾಲಕ್ಕೆ ದಾಳಿ ನಡೆಸಿದವು. ದಾಳಿ ವೇಳೆ ದಂದೆಯಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿ, ಏಳಕ್ಕೂ ಹೆಚ್ಚು ಲಾರಿ ಹಾಗೂ ತಯಾರಿಕೆ ಬಳಿಸುತ್ತಿದ್ದ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಯಿತು.

ಕೇಂದ್ರಗಳ ಬಳಿ ಇದ್ದ ಮನೆಗಳನ್ನು ಶೋಧ ನಡೆಸಿ ಅಲ್ಲಿದ್ದ  ಸಾಮಾಗ್ರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಕೆರೆ ದಡದಲ್ಲಿ ನಿರ್ಮಿಸಕೊಂಡಿದ್ದ ಟೆಂಟುಗಳಿಗೆ ಬೆಂಕಿ ಹಚ್ಚಿ ನಾಶಪಡಿಸಲಾಯಿತು. ಇಡೀ ಕಾರ್ಯಚರಣೆಯ ನೇತೃತ್ವವನ್ನು ಸ್ವತಃ ಜಿಲ್ಲಾಧಿಕಾರಿ ಕೆ.ಆರ್ ರಾಜು ಅವರೇ ವಹಿಸಿದ್ದರು.

ತಾಲ್ಲೂಕಿನ ನಂದಗುಡಿ ಹಾಗೂ ಅನುಗೊಂಡಹಳ್ಳಿ ಹೋಬಳಿ ಗಣಗಲೂರು ಗ್ರಾಪಂ ವ್ಯಾಪ್ತಿಗೆ ಒಳಪಡುವ ಬಾಗೂರು, ಆನೇಕಲ್ಲು ಗಡಿಯತತ್ತೂನೂರು, ಮಾರನೇಗೆರೆ, ಗಣಗಲೂರು, ತಿರುವರಂಗ, ಮುತ್ಸಂದ್ರ, ಮೇಡಿ ಮಲ್ಲಸಂದ್ರ, ಸಿದ್ದನಾಪುರ, ಶಿವನಾಪುರ, ನಾರಾಯಣಕೆರೆ, ಕೆ.ಮಲ್ಲಸಂದ್ರ, ಕೆರೆ ಅಂಗಳ ಮತ್ತು ಹಿಂಡುವಳಿ ಜಮೀನಿನಲ್ಲಿ ಇದ್ದ ಮರಳು ಕೇಂದ್ರಗಳ ಮೇಲೆ 25 ಅಧಿಕಾರಿಗಳನ್ನು ಒಳಗೊಂಡ 5 ತಂಡಗಳು ಏಕಕಾಲಕ್ಕೆ ದಾಳಿ ನಡೆಸಿದವು.

ದಾಳಿ ಮುನ್ಸೂಚನೆ: ದಾಳಿಯ ಸುಳಿವು ಅರಿತಿದ್ದ ಅಕ್ರಮ ಫಿಲ್ಟರ್ ದಂದೆಕೋರರು ತಾವು ಬಳಸುತ್ತಿದ್ದ ಮೋಟಾರುಗಳನ್ನು ಕೆರೆ ಅಂಗಳದ ಸನಿಹದಲ್ಲಿರುವ ತೋಟಗಳ ಬಳಿಯಲ್ಲಿ ತೆಂಗಿನಗರಿಗಳಿಂದ ಮುಚ್ಚಿಟ್ಟಿದ್ದನ್ನು ಪೊಲೀಸರು ಪತ್ತೆ ಹೆಚ್ಚಿ ವಶಪಡಿಸಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಯವರು, `ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಅಕ್ರಮ ಫಿಲ್ಟರ್ ಮರಳು ಕೇಂದ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದೆವು.ಈ ದಾಳಿ ಮುಂದುವರೆಯಲಿದೆ. ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿಯೂ ದಾಳಿ ನಡೆಸಲಾಗುವುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.