ADVERTISEMENT

ಅಕ್ರಮ- ಸಕ್ರಮಕ್ಕೆ ಅಂಕಿತ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:38 IST
Last Updated 3 ಸೆಪ್ಟೆಂಬರ್ 2013, 19:38 IST

ಬೆಂಗಳೂರು: ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿರುವುದನ್ನು ಸಕ್ರಮಗೊಳಿಸುವ ಕರ್ನಾಟಕ ಪಟ್ಟಣ ಮತ್ತು ಗ್ರಾಮೀಣ ಯೋಜನೆ (ಕೆಟಿಸಿಪಿ) ಕಾಯ್ದೆಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೊನೆಗೂ ಅಂಕಿತ ಹಾಕಿದ್ದಾರೆ. 2010ರಲ್ಲಿ ವಿಧಾನಮಂಡಲ ಈ ಮಸೂದೆಗೆ ಅಂಗೀಕಾರ ನೀಡಿತ್ತು.

2009ರ ಡಿಸೆಂಬರ್ 3ಕ್ಕೂ ಮೊದಲು ನಿರ್ಮಿಸಿದ ಕಟ್ಟಡಗಳಿಗೆ ಈ ಕಾಯ್ದೆ ಅನ್ವಯ ಆಗಲಿದೆ. ಆ.27ರಂದು ರಾಜ್ಯ ಗೆಜೆಟ್‌ನಲ್ಲೂ ಪ್ರಕಟಿಸಿದ್ದು, ಸದ್ಯದಲ್ಲೇ ಜಾರಿಗೆ ಬರಲಿದೆ.

ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಶೇಕಡಾ 25ರಷ್ಟು ನಿಯಮಗಳನ್ನು ಉಲ್ಲಂಘಿಸಿದ್ದರೆ, ಮಾರ್ಗಸೂಚಿ ದರದ ಶೇಕಡಾ 6ರಷ್ಟು ದಂಡ ಪಾವತಿಸಬೇಕಾಗುತ್ತದೆ. ಶೇಕಡಾ 25 ಮತ್ತು ಶೇಕಡಾ 50ಕ್ಕಿಂತ ಕಡಿಮೆ ನಿಯಮಗಳನ್ನು ಉಲ್ಲಂಘಿಸಿದರೆ ಮಾರ್ಗಸೂಚಿ ಮೌಲ್ಯದ ಶೇಕಡಾ 8ರಷ್ಟು ದಂಡ ಪಾವತಿಸಬೇಕಾಗುತ್ತದೆ.

ವಸತಿ ರಹಿತ ಕಟ್ಟಡಗಳು ಶೇಕಡಾ 12.5ರಷ್ಟು ನಿಯಮಗಳನ್ನು ಉಲ್ಲಂಘಿಸಿದ್ದರೆ ಮಾರ್ಗಸೂಚಿ ಮೌಲ್ಯದ ಶೇಕಡಾ 20ರಷ್ಟು ದಂಡ ವಿಧಿಸಿ ಸಕ್ರಮಗೊಳಿಸಲಾಗುತ್ತಿದೆ. ಶೇಕಡಾ 12.5ಕ್ಕೂ ಹೆಚ್ಚು ನಿಯಮಗಳನ್ನು ಉಲ್ಲಂಘಿಸಿದ್ದರೆ ಶೇಕಡಾ 35ರಷ್ಟು ದಂಡ ಪಾವತಿಸಬೇಕಾಗುತ್ತದೆ. ಅಕ್ರಮ- ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಲು ಒಂದು ವರ್ಷ ಅವಕಾಶ ನೀಡಲಾಗಿದೆ.

ಕಂದಾಯ ನಿವೇಶನಗಳಲ್ಲಿ ನಿರ್ಮಿಸಿದ ಮನೆಗಳ ಸಕ್ರಮ ಯೋಜನೆಗೆ ಸಂಬಂಧಿಸಿದ ಮಸೂದೆಯನ್ನು ರಾಜ್ಯಪಾಲರು ಹಿಂದಕ್ಕೆ ಕಳುಹಿಸಿದ್ದು, ಅದನ್ನು ರಾಜ್ಯ ಸರ್ಕಾರ ಮತ್ತೆ ವಿಧಾನಮಂಡಲದಲ್ಲಿ ಮಂಡಿಸುವ ಸಾಧ್ಯತೆ ಇದೆ. ಈ ಕುರಿತ ಸಿದ್ಧತೆ ಕಂದಾಯ ಇಲಾಖೆಯಲ್ಲಿ ನಡೆದಿದೆ.

ರಾಜ್ಯಪಾಲರು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಶೀಘ್ರದಲ್ಲೇ ನಿಯಮಗಳನ್ನು ರೂಪಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸಾಚಾರಿ ತಿಳಿಸಿದ್ದಾರೆ.

ಅಕ್ರಮ- ಸಕ್ರಮದಲ್ಲಿ ಏನಿದೆ?
2009ರ ಡಿ.3ಕ್ಕೂ ಮುನ್ನ ನಿರ್ಮಿಸಿದ್ದ ಕಟ್ಟಡಗಳಲ್ಲಿ ಉಲ್ಲಂಘನೆಗಳ ಸಕ್ರಮಕ್ಕೆ ಈ ಕಾಯ್ದೆ ಅನ್ವಯ

ಶೇ.25ರಷ್ಟು ನಿಯಮ ಉಲ್ಲಂಘಿಸಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ, ಮಾರ್ಗಸೂಚಿ ಮೌಲ್ಯದ ಶೇ.6ರಷ್ಟು ದಂಡ

ಶೇ.25ರಿಂದ 50ರಷ್ಟು ನಿಯಮ ಉಲ್ಲಂಘಿಸಿರುವ ವಸತಿ ರಹಿತ ಕಟ್ಟಡಗಳಿಗೆ ಮಾರ್ಗಸೂಚಿ ಮೌಲ್ಯದ ಶೇ.8ರಷ್ಟು ದಂಡ

ಶೇ.12.5 ಮತ್ತು ಶೇ.25ರಷ್ಟು ನಿಯಮ ಉಲ್ಲಂಘಿಸಿದ ವಾಣಿಜ್ಯ ಕಟ್ಟಡಗಳಿಗೆ ಶೇ.35ರಷ್ಟು ದಂಡ

2014ರ ಆಗಸ್ಟ್ 27ಕ್ಕೆ ಮುನ್ನ ಸಕ್ರಮಕ್ಕೆ ಅವಕಾಶ

ಕಂದಾಯ ಭೂಮಿಯಲ್ಲಿನ ಕಟ್ಟಡಗಳ ಸಕ್ರಮಕ್ಕೆ ಇನ್ನೂ ಸಿಕ್ಕಿಲ್ಲ ಅನುಮತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.