ADVERTISEMENT

`ಅಟಲ್ ಜೀ ಜನಸ್ನೇಹಿ ಕೇಂದ್ರ' ಉದ್ಘಾಟನೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಪ್ರಯುಕ್ತ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:37 IST
Last Updated 25 ಡಿಸೆಂಬರ್ 2012, 19:37 IST

ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಪ್ರಯುಕ್ತ `ಅಟಲ್ ಜೀ ಜನಸ್ನೇಹಿ ಕೇಂದ್ರ' ವನ್ನು ಮಲ್ಲೇಶ್ವರದಲ್ಲಿ ಮಂಗಳವಾರ ಉದ್ಘಾಟನೆ ಮಾಡಲಾಯಿತು.
ಈ ಜನಸ್ನೇಹಿ ಕೇಂದ್ರದಲ್ಲಿ ಎಲ್ಲ ಕಂದಾಯ ವಿಭಾಗಗಳ ಸೇವೆಗಳು ದೊರೆಯಲಿವೆ. ಈ ಭಾಗದ ನಾಗರಿಕರು ಇನ್ನು ಮುಂದೆ ತಾಲ್ಲೂಕು ಕಚೇರಿಗೆ ಅಲೆಯಬೇಕಾಗಿಲ್ಲ. ವೃದ್ಧರ ಮಾಸಾಶನ, ವಿಧವಾ ವೇತನ, ಜಾತಿ ಪ್ರಮಾಣ ಪತ್ರ ಮೊದಲಾದ ಎಲ್ಲ ಸೇವೆಗಳಿಗೆ ಈ ಕೇಂದ್ರವನ್ನೇ ಸಂಪರ್ಕಿಸಬಹುದು.

ಇದೇ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಸುಮಾರು 3000 ಜನರು ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿದ್ದರು. 500 ಮಂದಿ ಆಟೋಚಾಲಕರಿಗೆ ಸಮವಸ್ತ್ರ, 10 ಮಂದಿ ಅಂಗವಿಕಲರಿಗೆ ದ್ವಿಚಕ್ರ ವಾಹನ, 300 ಜನಕ್ಕೆ ಸೈಕಲ್, 20 ಜನಕ್ಕೆ ತಳ್ಳುವ ಗಾಡಿ ಹಾಗೂ 50 ಜನಕ್ಕೆ ಇಸ್ತ್ರಿ ಪೆಟ್ಟಿಗೆಗಳನ್ನು ವಿತರಿಸಲಾಯಿತು.

ಶಾಸಕ ಡಾ.ಸಿ.ಎನ್.ಅಶ್ವಥ್‌ನಾರಾಯಣ್ ಅವರು ಮಾತನಾಡಿ, `ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನಾಚರಣೆಯನ್ನು ದೇಶದಾದ್ಯಂತ ಹಬ್ಬದಂತೆ ಆಚರಿಸುವಂತಾಗಲಿ' ಎಂದರು.

`ಅಟಲ್ ಜೀ ಅವರ ಆಡಳಿತಾವಧಿಯಲ್ಲಿ ಯಾವುದೇ ಬೆಲೆ ಏರಿಕೆಯಾಗದೆ, ದೇಶದ ಜನತೆಗೆ ಜನಪರ ಆಡಳಿತವನ್ನು ನೀಡಿದರು' ಎಂದು ಹೇಳಿದರು.

ಬಿಜೆಪಿ ನಗರದ ಅಧ್ಯಕ್ಷ ಸುಬ್ಬಣ್ಣ ಮಾತನಾಡಿ, `ಅಟಲ್ ಬಿಹಾರಿ ವಾಜಪೇಯಿಯವರ ವ್ಯಕ್ತಿತ್ವ ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಿದೆ. ಅವರ ಹುಟ್ಟು ಹಬ್ಬದ ದಿನದಂದು ನಾವು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪಯತ್ನಿಸಬೇಕು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.