ADVERTISEMENT

ಅಡಿಗರ ಕಾವ್ಯ, ಬಸವಣ್ಣನವರ ವಚನ...

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ಬೆಂಗಳೂರು: ಬಜೆಟ್ ಮಂಡಿಸುವ ಸಂದರ್ಭ ವಚನಗಳು ಮತ್ತು ಕಾವ್ಯದ ಸಾಲುಗಳನ್ನು ಹೇಳುವ ಪರಂಪರೆ ಮುಂದುವರಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು, ತಾವು ಹೊಸ ಹಾದಿ ಹಿಡಿಯುವುದಾಗಿ ಹೇಳಿದ್ದು ಕವಿ ಗೋಪಾಲಕೃಷ್ಣ ಅಡಿಗರ ಕಾವ್ಯ ಓದುವ ಮೂಲಕ.

`ಹೊಸ ಹಾದಿಯನು ಹಿಡಿದು ನಡೆಯಣ್ಣ, ಮುಂದೆ! ಹೊಸ ಜೀವ, ಹೊಸ ಭಾವ, ಹೊಸ ವೇಗದಿಂದೆ~ ಎಂದು ಹೇಳುವ ಮೂಲಕ ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಲ್ಲಿ ಹೊಸತನ ತರುವ ಪ್ರಯತ್ನ ಮಾಡಲಾಗುವುದು ಎಂದರು.

ಯುವ ಸಮುದಾಯಕ್ಕೆ ಮೀಸಲಿಟ್ಟಿರುವ ಅನುದಾನ ಕುರಿತು ಹೇಳುವಾಗ ಗೌಡರು ಆಯ್ಕೆ ಮಾಡಿಕೊಂಡಿದ್ದೂ ಅಡಿಗರ ಜನಪ್ರಿಯ ಕಾವ್ಯದ ಸಾಲುಗಳನ್ನು. `ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು. ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ, ಹರೆಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ...~ ಎಂದ ಮುಖ್ಯಮಂತ್ರಿಗಳು, `ಹೊಸ ನಾಡು ಕಟ್ಟುವ ಕಾಯಕದಲ್ಲಿ ಸರ್ಕಾರ ಯುವ ಶಕ್ತಿಯ ರಚನಾತ್ಮಕ ಬಳಕೆಯ ಸಂಕಲ್ಪ ಮಾಡಿದೆ~ ಎಂದು ಘೋಷಿಸಿದರು.

ಬಜೆಟ್ ಕುರಿತು ಎದುರಾಗುವ ಟೀಕೆ-ಟಿಪ್ಪಣಿಗಳಿಂದ ವಿಚಲಿತ ಆಗುವುದಿಲ್ಲ ಎಂಬುದನ್ನೂ `ನ್ಯಾಯನಿಷ್ಠುರಿ, ದಾಕ್ಷಿಣ್ಯ ಪರ ನಾನಲ್ಲ; ಲೋಕ ವಿರೋಧಿ, ಶರಣನಾರಿಗೂ ಅಂಜುವವನಲ್ಲ~ ವಚನದ ಮೂಲಕ ಸೂಚ್ಯವಾಗಿ ಹೇಳಿದರು!

`ಮಂಕುತಿಮ್ಮನ ಕಗ್ಗ~ದ `ಕಳವಳವ ನೀಗಿಬಿಡು, ತಳಮಳ ದೂರವಿಡು; ಕಳೆ, ತಳ್ಳು ಗಲಭೆ ಗಾಬರಿಯ ಮನದಿಂದ~ ಎಂದು ಬಜೆಟ್ ಮಂಡನೆಯ ಕೊನೆಯಲ್ಲಿ ಹೇಳುವ ಮೂಲಕ ಸ್ಥಿತಪ್ರಜ್ಞ ಮನೋಭಾವ ಬಿಡಲಾರೆ ಎಂದು ಮುಖ್ಯಮಂತ್ರಿ ಸದಾನಂದಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.