ಬೆಂಗಳೂರು: ‘ರಾಜಕಾರಣಿಗಳು ಲೂಟಿ ಮಾಡುವುದೇ ರಾಜಕಾರಣ ಎಂದು ಭಾವಿಸಿದ್ದಾರೆ. ಅಧಿಕಾರ ಸಿಕ್ಕ ಕೂಡಲೇ ರಾಜಕಾರಣಿಗಳು ಹಾಗೂ ಅಧಿಕಾರಿ ಗಳು ಅಧ್ಯಯನದಿಂದ ವಿಮು ಖರಾಗು ತ್ತಾರೆ. ಇಂತಹವರ ನಡುವೆ ಡಾ.ಸಿ.ಸೋಮಶೇಖರ್ ಅವರು ಅಪರೂಪದ ವ್ಯಕ್ತಿ’ ಎಂದು ಹಿರಿಯ ಸಾಹಿತಿ ಡಾ.ದೇ. ಜವರೇಗೌಡ ಶ್ಲಾಘಿಸಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಅಭಿನಂದನಾ ಸಮಾರಂಭದಲ್ಲಿ ಮಾತ ನಾಡಿದರು. ‘ನಾನು ಕನ್ನಡ ಮಾಧ್ಯಮದಲ್ಲಿ ಬೆಳೆದ ವಿಜ್ಞಾನಿ ಎಂದು ಡಾ.ಸಿ.ಎನ್.ಆರ್.ರಾವ್ ಹೇಳಿದ್ದಾರೆ. ಸೋಮಶೇಖರ್ ಅವರೂ ಕನ್ನಡ ಮಾಧ್ಯಮದಲ್ಲಿ ಕಲಿತು ಉನ್ನತ ಹುದ್ದೆಗೆ ತಲುಪಿದ್ದಾರೆ. ಅವರು ಬಳಸುವ ಕನ್ನಡ ಶಕ್ತಿಶಾಲಿಯಾದುದು’ ಎಂದು ಬಣ್ಣಿಸಿದರು.
ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಕಾರ್ಯಕ್ರಮ ಉದ್ಘಾಟಿಸಿ, ‘ಸೋಮಶೇಖರ್ ವಿದ್ಯಾ ರ್ಥಿಯಾಗಿದ್ದಾಗ ಜನಪ್ರಿಯ ರಾಗಿದ್ದರು. ಬಡವರ ಸೇವೆ ಮಾಡುವ ಮೂಲಕ ಅಧಿಕಾರಿಯಾಗಿಯೂ ಜನಪ್ರಿಯರಾಗಿದ್ದಾರೆ. ಅವರು ಜನಪ್ರಿಯ ಆಡಳಿತ ಗಾರ’ ಎಂದರು.
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಿರಿಯ ಕವಿ ಡಾ.ಕೆ.ಎಸ್. ನಿಸಾರ್ ಅಹಮದ್ ಅಭಿನಂದನಾ ಛಾಯಾಚಿತ್ರ ಸಂಪುಟ ‘ಚಿತ್ರ ವಿಹಾರ’ ಬಿಡುಗಡೆ ಮಾಡಿದರು. ನಿವೃತ್ತ ನ್ಯಾಯಮೂರ್ತಿಗಳಾದ ಶಿವರಾಜ ವಿ.ಪಾಟೀಲ್, ವಿ.ಎಸ್.ಮಳಿಮಠ, ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ಸಂಸ್ಕೃತ ವಿವಿಯ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.