ಬೆಂಗಳೂರು: ‘ಬಿಎಂಟಿಸಿಯ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಚಾಲಕ ಮಧು ಆತ್ಮಹತ್ಯೆಗೆ ಯತ್ನಿಸಿದ್ದಾರೆ’ ಎಂದು ಆರೋಪಿಸಿ ಶಾಂತಿನಗರದ ಡಿಪೊ 2 ಹಾಗೂ 3ರ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ 6ರಿಂದ 10 ಗಂಟೆಯ ವರೆಗೆ ಡಿಪೊ ವ್ಯವಸ್ಥಾಪಕರ ಕಚೇರಿ ಮುಂದೆ ಚಾಲಕರು ಹಾಗೂ ನಿರ್ವಾಹಕರು ಪ್ರತಿಭಟಿಸಿದರು. ಡಿಪೊದಿಂದ ಬಸ್ಗಳನ್ನು ಹೊರ ಹೋಗದಂತೆ ತಡೆದು ಹಿರಿಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
‘ಮಧು ಅವರ ಮನೆಯಲ್ಲಿ ಸೋಮವಾರ ಸಮಾರಂಭವಿತ್ತು. ರಜೆ ಕೇಳಿದ್ದರೂ ವ್ಯವಸ್ಥಾಪಕ ಪ್ರಕಾಶ್ ಅವರು ರಜೆ ಮಂಜೂರು ಮಾಡಿರಲಿಲ್ಲ. ಕೆಲಸಕ್ಕೆ ಬಂದಿದ್ದರೂ ತಡವಾಗಿ ಬಂದ ನೆಪವೊಡ್ಡಿ ನೋಟಿಸ್ ನೀಡಿದ್ದಾರೆ’ ಎಂದು ನಿರ್ವಾಹಕರೊಬ್ಬರು ತಿಳಿಸಿ ದರು.
‘ಆತ್ಮಹತ್ಯೆ ಸಂಬಂಧ ಅಧಿಕಾರಿ ಗಳನ್ನು ಕೇಳಿದರೆ, ‘ಇದೊಂದು ಚಿಕ್ಕ ವಿಚಾರ. ನೀವು ಇದನ್ನು ದೊಡ್ಡದು ಮಾಡುತ್ತಿದ್ದೀರಿ’ ಎನ್ನುತ್ತಿದ್ದಾರೆ. ರಜೆ ಕೇಳಿದರೂ ಸಹ ಕೊಡುವುದಿಲ್ಲ. ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಮನುಷತ್ವ ಇಲ್ಲದೆ ವರ್ತಿಸುತ್ತಿದ್ದಾರೆ. ಹಣ ನೀಡಿದವರಿಗೆ ಮಾತ್ರ ರಜೆ ಕೊಡುತ್ತಾರೆ’ ಎಂದು ಆರೋಪಿಸಿದರು.
ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ವಿಲ್ಸನ್ ಗಾರ್ಡನ್ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಬಸ್ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನೋಟಿಸ್ ನೀಡಿದ್ದಕ್ಕೆ ಆತ್ಮಹತ್ಯೆ ಯತ್ನ: ಡಿಪೊ–2ರ ಆವರಣದಲ್ಲಿ ಸೋಮವಾರ ರಾತ್ರಿ ಚಾಲಕ ಮಧು ಜಿರಳೆ ಔಷಧಿ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡಿದ್ದ ಅವರನ್ನು ಚಾಲಕರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.
‘ಸೋಮವಾರ ಬೆಳಿಗ್ಗೆ ಮಧು ಕೆಲಸಕ್ಕೆ ತಡವಾಗಿ ಬಂದಿದ್ದರು. ಅದೇ ಕಾರಣಕ್ಕೆ ಡಿಪೊ ವ್ಯವಸ್ಥಾಪಕರು ನೋಟಿಸ್ ನೀಡಿದ್ದರು. ಅವರನ್ನು ಕೆಲಸಕ್ಕೆ ನಿಯೋಜಿಸಿರಲಿಲ್ಲ. ನಾವು ಯಾವುದೇ ರೀತಿಯ ಕಿರುಕುಳ ನೀಡಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದರು ಎಂಬುದು ಗೊತ್ತಾಗಿಲ್ಲ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುಣಮುಖರಾದ ಬಳಿಕ ಹೇಳಿಕೆ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ವಿಲ್ಸನ್ ಗಾರ್ಡನ್ ಪೊಲೀಸರು
ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.