ಹೊಸಕೋಟೆ: ಪಟ್ಟಣದ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿ ರದ್ದತಿಗೆ ನ್ಯಾಯಾಲಯದಲ್ಲಿ ತಡೆ ಆಜ್ಞೆ ದೊರಕಿದ್ದರಿಂದ ಅದರ ಅಧ್ಯಕ್ಷರಾಗಿ ಎಚ್.ಎ.ನಟರಾಜ್ ಮುಂದುವರೆದಿದ್ದಾರೆ.
ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರುಗಳಾದ ಎಸ್.ಅರುಣ್ ಕುಮಾರ್, ಎಸ್.ಶ್ರೀನಿವಾಸ್, ಮಾಲತಿ, ಆರ್.ಸೋಮಸುಂದರ್, ಪಿ.ಚೌಡಪ್ಪ ಹಾಗು ಪಿ.ಎಸ್.ಮಂಜುನಾಥ್ ಅವರು ಬ್ಯಾಂಕಿನ ಹಿತಾಸಕ್ತಿಗೆ ಬಾಧಕವಾಗುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಂದ ದೂರಿನ ಅನ್ವಯ ದೊಡ್ಡಬಳ್ಳಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಅವರನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿ ನ.25 ರಂದು ಆದೇಶ ನೀಡಿದ್ದರು.
ಆಡಳಿತ ಮಂಡಳಿ ಸ್ಥಾನದಲ್ಲಿ ನೆಲಮಂಗಲ ತಾಲ್ಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಪಿ.ಮುನಿರಾಜ ಅವರನ್ನು ಬ್ಯಾಂಕಿನ ವಿಶೇಷ ಅಧಿಕಾರಿಯನ್ನಾಗಿ 6 ತಿಂಗಳ ಕಾಲ ಕಾರ್ಯ ನಿರ್ವಹಿಸಲು ಸಹಾಯಕ ನಿಬಂಧಕರು ಸೂಚನೆ ನೀಡಿದ್ದರು. ಹೀಗಾಗಿ ಬ್ಯಾಂಕಿನ ಅಧ್ಯಕ್ಷರಾದ ಎಚ್.ಎ.ನಟರಾಜ್ ಅಧಿಕಾರದಿಂದ ವಂಚಿತರಾಗಿದ್ದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕರ ಆದೇಶ ಪ್ರಶ್ನಿಸಿ ಅನರ್ಹಗೊಂಡ ನಿರ್ದೇಶಕರು ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಪರಿಶೀಲನೆ ನಡೆಸಿದ ನ್ಯಾಯಾಲಯ ಆದೇಶಕ್ಕೆ ತಡೆ ಆಜ್ಞೆ ನೀಡಿತು.
ಬ್ಯಾಂಕ್ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು ಇದನ್ನು ಸಹಿಸದ ಕೆಲವರು ರಾಜಕೀಯ ದುರದ್ದೇಶದಿಂದ ಪಿತೂರಿ ನಡೆಸಿದರು.ಬ್ಯಾಂಕ್ ಇನ್ನಷ್ಟು ಪ್ರಗತಿ ಸಾಧಿಸುವತ್ತ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಅಧ್ಯಕ್ಷ ಎಚ್.ಎ.ನಟರಾಜ್ ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.