ಬೆಂಗಳೂರು: ಕೆ.ಆರ್.ಪುರದ ರೈಲ್ವೆ ಇಲಾಖೆಯ ವಸತಿ ಗೃಹದಲ್ಲಿ ರಮಿತಾ (21) ಎಂಬುವರ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ. ಅವರನ್ನು ಯಾರೋ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿರುವ ತಾಯಿ ರೋಜಾ, ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತ ರಮಿತಾ, ಮೂರು ವಾರಗಳ ಹಿಂದಷ್ಟೇ ನರೇಶ್ ಎಂಬುವರನ್ನು ಮದುವೆಯಾಗಿದ್ದರು. ಪತಿಯು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ, ಅವರಿಬ್ಬರು ವಸತಿ ಗೃಹದಲ್ಲಿ ನೆಲೆಸಿದ್ದರು.
ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ನರೇಶ್ ಹಾಗೂ ರಮಿತಾ, ಸ್ನೇಹಿತರಾಗಿದ್ದರು. ನಂತರ ಪ್ರೀತಿಸಲು ಆರಂಭಿಸಿ
ದ್ದರು. ಅವರ ಪ್ರೀತಿಯನ್ನು ಒಪ್ಪಿಕೊಂಡಿದ್ದ ಕುಟುಂಬದವರು, ಅವರಿಬ್ಬರಿಗೆ ಮಾ. 19ರಂದು ಚಿಕ್ಕ ತಿರುಪತಿಯಲ್ಲಿ ಮದುವೆ ಮಾಡಿಸಿದ್ದರು. ಮೂರು ದಿನಗಳ ಹಿಂದಷ್ಟೇ ನರೇಶ್ ಅವರ ತಾಯಿಯ ವಿಷಯವಾಗಿ ದಂಪತಿ ನಡುವೆ ಗಲಾಟೆ ಆಗಿತ್ತು ಎಂದು ಪೊಲೀಸರು ತಿಳಿಸಿದರು.
‘ನರೇಶ್ ಬೇರೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅದೇ ಕಾರಣಕ್ಕೆ ಅವರು ತಮ್ಮ ಚಿಕ್ಕಪ್ಪ–ಚಿಕ್ಕಮ್ಮ ಜತೆ ಸೇರಿ ಕಿರುಕುಳ ನೀಡಿ ರಮಿತಾಳನ್ನು ಕೊಲೆಗೈದಿದ್ದಾರೆ’ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಅದರನ್ವಯ ಎಫ್ಐಆರ್ ದಾಖಲಿಸಿಕೊಂಡು ಆರೋಪಿ ನರೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.