ಬೆಂಗಳೂರು: ಮಾರತ್ಹಳ್ಳಿ ಹೊರ ವರ್ತುಲ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ದಿನೇಶ್ (28) ಎಂಬ ಸಾಫ್ಟ್ವೇರ್ ಕಂಪೆನಿ ಉದ್ಯೋಗಿ ಸಾವನ್ನಪ್ಪಿದ್ದಾರೆ. ಬಿ.ನಾರಾಯಣಪುರ ನಿವಾಸಿಯಾದ ಅವರು ದೇವರಬೀಸನಹಳ್ಳಿ ಸಮೀಪದ ‘ಕ್ವೆಸ್ಟ್’ ಎಂಬ ಸಾಫ್ಟ್ವೇರ್ ಕಂಪೆನಿಯಲ್ಲಿ ವಿನ್ಯಾಸಕಾರರಾಗಿದ್ದರು.
ದಿನೇಶ್, ಕಂಪೆನಿಯಿಂದ ರಾತ್ರಿ ಬೈಕ್ನಲ್ಲಿ ಮನೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಬೈಕ್ ಗುದ್ದಿಸಿದ ಅವರಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏರ್ಪೋರ್ಟ್ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಟ್ಟಡದಿಂದ ಬಿದ್ದು ಸಾವು
ಕೂಲಿ ಕಾರ್ಮಿಕನೊಬ್ಬ ನಿರ್ಮಾಣ ಹಂತದ ಕಟ್ಟಡದಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಕೋರಮಂಗಲದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ತಮಿಳುನಾಡು ಮೂಲದ ವೇಡಿಯಪ್ಪನ್(38) ಮೃತಪಟ್ಟವರು. ಕೋರಮಂಗಲ ಆರನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಆ ಕಟ್ಟಡದ ಸಮೀಪವೇ ತಾತ್ಕಾಲಿಕ ಶೆಡ್ನಲ್ಲಿ ವಾಸವಾಗಿದ್ದರು.
ವೇಡಿಯಪ್ಪನ್, ಕಟ್ಟಡದ ನಾಲ್ಕನೇ ಅಂತಸ್ತಿನ ಅಂಚಿನಲ್ಲಿ ಸಾರ್ವೆಗೆ ಹಾಕಿದ್ದ ಮರದ ತುಂಡುಗಳನ್ನು ತೆರವುಗೊಳಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.