ADVERTISEMENT

ಅಪಘಾತ: ಸಾಫ್ಟ್‌ವೇರ್‌ ಕಂಪೆನಿ ಉದ್ಯೋಗಿ ಸಾವು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಬೆಂಗಳೂರು: ಮಾರತ್‌ಹಳ್ಳಿ ಹೊರ ವರ್ತುಲ ರಸ್ತೆ­ಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಬೈಕ್‌ ಅಪಘಾತ­ದಲ್ಲಿ ದಿನೇಶ್‌ (28) ಎಂಬ ಸಾಫ್ಟ್‌ವೇರ್‌ ಕಂಪೆನಿ ಉದ್ಯೋಗಿ ಸಾವನ್ನಪ್ಪಿದ್ದಾರೆ. ಬಿ.ನಾರಾಯಣಪುರ ನಿವಾಸಿಯಾದ ಅವರು ದೇವರ­ಬೀಸನಹಳ್ಳಿ ಸಮೀಪದ ‘ಕ್ವೆಸ್ಟ್‌’ ಎಂಬ ಸಾಫ್ಟ್‌­ವೇರ್‌ ಕಂಪೆನಿಯಲ್ಲಿ ವಿನ್ಯಾಸ­ಕಾರರಾಗಿದ್ದರು.

ದಿನೇಶ್‌, ಕಂಪೆನಿಯಿಂದ ರಾತ್ರಿ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ಅಪ­ಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಬೈಕ್‌ ಗುದ್ದಿ­ಸಿದ ಅವರಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏರ್‌ಪೋರ್ಟ್‌ ಸಂಚಾರ ಠಾಣೆ­ಯಲ್ಲಿ ದೂರು ದಾಖ­ಲಾಗಿದೆ.

ಕಟ್ಟಡದಿಂದ ಬಿದ್ದು ಸಾವು
ಕೂಲಿ ಕಾರ್ಮಿಕನೊಬ್ಬ ನಿರ್ಮಾಣ ಹಂತದ ಕಟ್ಟಡ­ದಿಂದ ಆಯತಪ್ಪಿ ಬಿದ್ದು ಸಾವ­ನ್ನ­­ಪ್ಪಿರುವ ಘಟನೆ ಕೋರ­ಮಂಗಲ­ದಲ್ಲಿ ಶುಕ್ರವಾರ ರಾತ್ರಿ ನಡೆ­ದಿದೆ. ತಮಿಳುನಾಡು ಮೂಲದ ವೇಡಿ­ಯಪ್ಪನ್‌(38) ಮೃತ­ಪಟ್ಟವರು. ಕೋರ­ಮಂಗಲ ಆರನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ­ವೊಂದ­ರಲ್ಲಿ ಕೆಲಸ ಮಾಡುತ್ತಿದ್ದ ಅವರು ಆ ಕಟ್ಟಡದ ಸಮೀಪವೇ ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದರು.

ವೇಡಿಯಪ್ಪನ್‌, ಕಟ್ಟಡದ ನಾಲ್ಕನೇ ಅಂತ­­ಸ್ತಿನ ಅಂಚಿನಲ್ಲಿ ಸಾರ್ವೆಗೆ ಹಾಕಿದ್ದ ಮರದ ತುಂಡುಗಳನ್ನು ತೆರವು­ಗೊಳಿ­ಸು­ತ್ತಿ­ದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿ­ದ್ದಾರೆ. ತೀವ್ರವಾಗಿ ಗಾಯಗೊಂಡ ಅವ­ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸ­ಲಾ­ಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನ­ಪ್ಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.