ADVERTISEMENT

ಅಪಾರ ಜನರಿಂದ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:45 IST
Last Updated 26 ಜನವರಿ 2012, 19:45 IST

ಬೆಂಗಳೂರು: ನಗರದಲ್ಲಿ ಗುರುವಾರ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ 63 ನೇ ಗಣರಾಜ್ಯೋತ್ಸವವನ್ನು ವೀಕ್ಷಿಸಲು ಅಪಾರ ಜನರು ಆಗಮಿಸಿದ್ದರು. ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಸಂದರ್ಭವನ್ನು ಕಣ್ತುಂಬಿಕೊಳ್ಳಲು ತಂಡೋಪತಂಡವಾಗಿ ಪೆರೇಡ್ ಮೈದಾನಕ್ಕೆ ಹರಿದು ಬಂದರು. ಸಾಕಷ್ಟು ಸಂಖ್ಯೆಯಲ್ಲಿ ವಿದೇಶೀಯರೂ ಗಣರಾಜ್ಯೋತ್ಸವ ವೀಕ್ಷಿಸಲು ಆಗಮಿಸಿದ್ದರು.

`ನಮ್ಮ ಮೆಟ್ರೊ~ದ ಎಂ.ಜಿ.ರಸ್ತೆಯ ನಿಲ್ದಾಣದ ಮೇಲಿನಿಂದ ಗಣರಾಜ್ಯೋತ್ಸವದ ಅಪರೂಪದ ದೃಶ್ಯಗಳನ್ನು ನೋಡುವ ಆಸೆ ಹೊತ್ತಿದ್ದ ಹಲವರಿಗೆ ಮೆಟ್ರೊ ನಿಲ್ದಾಣದ ಗಾಜಿನ ಕಿಟಕಿಗಳು ಅಡ್ಡಿಯಾಗಿದ್ದವು. ಹಲವರು ನಿಲ್ದಾಣದ ಗಾಜಿನ ಕಿಟಕಿಗಳನ್ನು ತೆರೆದು ಮೈದಾನದ ದೃಶ್ಯಗಳನ್ನು ನೋಡಲು ಪ್ರಯತ್ನಿಸಿದರು.

ಗಣರಾಜ್ಯೋತ್ಸವದ ದೃಶ್ಯಗಳನ್ನು ನೊಡುವ ಸಲುವಾಗಿ ಕೆಲವರು ಮೆಟ್ರೊ ರೈಲುಗಳಿಂದ ತಪ್ಪಿಸಿಕೊಳ್ಳಬೇಕಾಯಿತು. ಗುರುವಾರ ಮೆಟ್ರೊ ನಿಲ್ದಾಣ ಜನರಿಂದ ತುಂಬಿ ತುಳುಕಿತು.
ಗಣರಾಜ್ಯೋತ್ಸವದ ಸಮಾರಂಭ ಮುಗಿಯುವವರೆಗೂ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿತ್ತು.

`ಸಮಾರಂಭದ ಸಮಯವಾದ ಬೆಳಿಗ್ಗೆ 8.30 ರಿಂದ 11 ಗಂಟೆಯವರೆಗೆ ಮಹಾತ್ಮಾ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆಯ ಜಂಕ್ಷನ್ ಹಾಗೂ ಕುಂಬ್ಳೆ ವೃತ್ತದಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿತ್ತು. ಉಳಿದಂತೆ ಸಂಚಾರ ವ್ಯವಸ್ಥೆ ಗುರುವಾರ ಸುಗಮವಾಗಿತ್ತು~ ಎಂದು ಅಶೋಕನಗರ ಸಂಚಾರ ವಿಭಾಗದ ಎಸಿಪಿ ಎಸ್.ಎ.ಪಾಷಾ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.