ADVERTISEMENT

ಅಮುಂದುವರಿದ ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 18:30 IST
Last Updated 3 ಅಕ್ಟೋಬರ್ 2012, 18:30 IST

ಬೆಂಗಳೂರು: ಕಾವೇರಿ ಚಳವಳಿ ತೀವ್ರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮೈಸೂರು ನಡುವಿನ ರೈಲು ಮತ್ತು ಬಸ್ ಸಂಚಾರ ಬುಧವಾರವೂ ಅಸ್ತವ್ಯಸ್ತವಾಯಿತು.

ಬುಧವಾರ ಬೆಳಿಗ್ಗೆ 11ಕ್ಕೆ ಮೈಸೂರಿನಿಂದ ಹೊರಡಬೇಕಾಗಿದ್ದ ರೈಲನ್ನು, ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ರದ್ದುಪಡಿಸಲಾಯಿತು. ಮೈಸೂರು-ಶಿರಡಿ ಎಕ್ಸ್‌ಪ್ರೆಸ್ ರೈಲನ್ನು ಸುಮಾರು 150ಕ್ಕೂ ಹೆಚ್ಚು ರೈತರು ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಬಳಿ ತಡೆದರು. ಅಲ್ಲದೆ ಕಾವೇರಿ ಎಕ್ಸ್‌ಪ್ರೆಸ್, ಚಾಮುಂಡಿ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಇತರ ರೈಲುಗಳನ್ನು ಪ್ರತಿಭಟನಾಕಾರರು ಕೆಲ ಕಾಲ ತಡೆಹಿಡಿದರು ಎಂದು ನೈರುತ್ಯ ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಬಳಿ ಹೆದ್ದಾರಿ ತಡೆಯಿಂದಾಗಿ ಬಸ್ ಸಂಚಾರ ಅಸ್ತವ್ಯಸ್ತಗೊಂಡಿತು. ಮೈಸೂರು, ಮಂಡ್ಯ ಮತ್ತು ಕೊಡಗಿನ ಕೆಲ ಪ್ರದೇಶಗಳಿಗೆ ಕನಕಪುರ, ಮಳವಳ್ಳಿ, ಬನ್ನೂರು ಮಾರ್ಗವಾಗಿ 20 ಬಸ್‌ಗಳನ್ನು ಮಾತ್ರ ಬಿಡಲಾಯಿತು. ಸಂಜೆಯ ವೇಳೆ ಬನ್ನೂರು ಬಳಿಯೂ ರಸ್ತೆ ತಡೆ ನಡೆಸಿದ ಹಿನ್ನೆಲೆಯಲ್ಲಿ ಕಿರುಗಾವಲು ಮಾರ್ಗವಾಗಿ ಬಸ್‌ಗಳು ಸಂಚರಿಸಿದವು. ಮುಷ್ಕರದಿಂದಾಗಿ ರೂ 30 ಲಕ್ಷ ನಷ್ಟವುಂಟಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಮತ್ತು ಕ್ಯಾಬ್ ಮಾಲೀಕರ ಸಂಘ ಕೂಡ ಪ್ರತಿಭಟನೆ ಬೆಂಬಲಿಸಿ, ಇಲ್ಲಿನ ಪುರಭವನದ ಎದುರು ಗುರುವಾರ ಪ್ರತಿಭಟನೆ ನಡೆಸಲಿದೆ ಎಂದು ಮುಖಂಡ ರಾಧಾಕೃಷ್ಣ ಹೊಳ್ಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.