ADVERTISEMENT

ಅಲೆದಾಟ ತಪ್ಪಿಸಿದ ನೂತನ ನ್ಯಾಯಬೆಲೆ ಅಂಗಡಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 20:17 IST
Last Updated 10 ಜೂನ್ 2017, 20:17 IST
ನೂತನ ನ್ಯಾಯಬೆಲೆ ಅಂಗಡಿಯನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆಂಪರಾಜ್ ಗ್ರಾಮಸ್ಥರಿಗೆ ಪಡಿತರವನ್ನು ವಿತರಿಸಿದರು.
ನೂತನ ನ್ಯಾಯಬೆಲೆ ಅಂಗಡಿಯನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆಂಪರಾಜ್ ಗ್ರಾಮಸ್ಥರಿಗೆ ಪಡಿತರವನ್ನು ವಿತರಿಸಿದರು.   

ಬೆಂಗಳೂರು: ತಿರುಮೇನಹಳ್ಳಿಯ ಜನರಿಗೆ ಅನುಕೂಲವಾಗಲು ಗ್ರಾಮದಲ್ಲಿಯೇ ಹೊಸದೊಂದು ನ್ಯಾಯಬೆಲೆ ಅಂಗಡಿಯನ್ನು ತೆರೆಯಲಾಗಿದೆ.
ನ್ಯಾಯಬೆಲೆ ಅಂಗಡಿ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆಂಪರಾಜ್, ‘ನಲವತ್ತು ವರ್ಷಗಳಿಂದ ಈ ಗ್ರಾಮದ ಜನರು ಪಡಿತರ ಪಡೆಯಲು ನಾಲ್ಕೈದು ಕಿ.ಮೀ. ದೂರ ಕ್ರಮಿಸಬೇಕಿತ್ತು. ಮೂನ್ನೂರಕ್ಕೂ ಹೆಚ್ಚು ಮನೆಗಳಿರುವ ಈ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಬಹಳ ವರ್ಷಗಳಿಂದ ಸ್ಥಳೀಯರು ಮನವಿ ಮಾಡುತ್ತಿದ್ದರು’ ಎಂದು ಹೇಳಿದರು.

‘ಈ ಗ್ರಾಮದ ಜನರು ಪಡಿತರ ಪಡೆದುಕೊಳ್ಳಲು ಮಂಡೂರು ಗ್ರಾಮಕ್ಕೆ ಹೋಗುತ್ತಿದ್ದರು. ಜನಸಂಖ್ಯೆ ಕಡಿಮೆ ಇದೆ ಎನ್ನುವ ಕಾರಣಕ್ಕೆ ನ್ಯಾಯಬೆಲೆ ಅಂಗಡಿ ತೆರೆಯಲಾಗಿರಲಿಲ್ಲ. ಎರಡು ತಿಂಗಳಿಂದ ಸತತವಾಗಿ ಆರೋಗ್ಯ ಇಲಾಖೆಗೆ ಮನವಿ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಮಾಡಿದ್ದೇವೆ’ ಎಂದರು.

‘ಈ ಊರಿಗೆ ಬಿಎಂಟಿಸಿ ಬಸ್ ವ್ಯವಸ್ಥೆ ಬೇಕಿದೆ. ಸದ್ಯ ಗ್ರಾಮದ ಜನತೆ ಬಸ್‌ಗಾಗಿ ಒಂದೂವರೆ ಕಿ.ಮೀ ನಡೆದು ಬೂದಿಗೆರೆ ರಸ್ತೆಗೆ ಹೋಗಬೇಕು. ಶೀಘ್ರ ನಾಲ್ಕೈದು ಬಸ್‌ಗಳ ಸೇವೆ ನೀಡುವಂತೆ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಮಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜರ್ನಾದನ ಗೌಡ, ‘ತಿರುಮೇನಹಳ್ಳಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತೇವೆ. ಈಗಾಗಲೇ ಗ್ರಾಮದ ರಸ್ತೆಗಳನ್ನು ಡಾಂಬರೀಕರಣಗೊಳಿಸಿದ್ದೇವೆ. ಮಂಡೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಪ್ರತಿ ತಿಂಗಳು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.