ADVERTISEMENT

ಆಗಸ್ಟ್ 10ರಿಂದ ಜೈವಿಕ ಇಂಧನ ಮೇಳ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 19:30 IST
Last Updated 5 ಜುಲೈ 2012, 19:30 IST

ಬೆಂಗಳೂರು: ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಆಶ್ರಯದಲ್ಲಿ ಅಂತರರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯ ಅಂಗವಾಗಿ ಆಗಸ್ಟ್ 10ರಿಂದ 12ರ ವರೆಗೆ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಜೈವಿಕ ಇಂಧನ ಮೇಳವನ್ನು ಆಯೋಜಿಸಲಾಗುವುದು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿಯ ಅಧ್ಯಕ್ಷ ವೈ.ಬಿ.ರಾಮಕೃಷ್ಣ, `ಮೇಳದಲ್ಲಿ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗಳು, ಚಿತ್ರಪ್ರದರ್ಶನಗಳು, ಚಲನಚಿತ್ರ, ಪ್ರದರ್ಶನ ಮಳಿಗೆಗಳು, ಜೈವಿಕ ಇಂಧನ ಕುರಿತಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ವರೆಗೆ ಜೈವಿಕ ಇಂಧನ ಕ್ಷೇತ್ರದಲ್ಲಿ ರಾಜ್ಯ ಮಾಡಿರುವ ಸಾಧನೆ, ರೈತರ ಸ್ಪಂದನೆ, ಕೈಗೆಟಕುವ ದೇಸಿ ತಂತ್ರಜ್ಞಾನದ ಬಗ್ಗೆ ಮೇಳದಲ್ಲಿ ಬೆಳಕು ಚೆಲ್ಲಲಾಗುವುದು~ ಎಂದರು.

`ಮೇಳವನ್ನು ಮುಖ್ಯಮಂತ್ರಿ ಅವರು ಉದ್ಘಾಟಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು, ಅಧಿಕಾರಿಗಳು ಹಾಗೂ ವಿಷಯತಜ್ಞರು ಸಭೆಯಲ್ಲಿ ಭಾಗವಹಿಸುವರು. ಛತ್ತೀಸ್‌ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಜ್ಯದ 14 ಸಾವಿರ ಶಾಲೆಗಳಿಗೆ ಮೇಳದ ಬಗ್ಗೆ ವಿವರಣಾತ್ಮಕ ಭಿತ್ತಿಪತ್ರ ಕಳುಹಿಸಿಕೊಡಲಾಗುವುದು~ ಎಂದರು.

`ಮೇಳದ ಅಂಗವಾಗಿ ಜುಲೈ 12ರಂದು ನಗರದ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದ್ದು, ಮೊದಲ ಸ್ಥಾನಿಗೆ ರೂ 3,000, ದ್ವಿತೀಯ ಸ್ಥಾನಿಗೆ ರೂ 2,000, ತೃತೀಯ ಸ್ಥಾನಿಗೆ ರೂ 1,000 ನೀಡಲಾಗುವುದು. 500 ರೂಪಾಯಿಯ ಐದು ಸಮಾಧಾನಕರ ಬಹುಮಾನಗಳು ಇವೆ~. 

ಜುಲೈ 30ರಂದು ರಾಜ್ಯ ಮಟ್ಟದ ಪ್ರಬಂಧ ಹಾಗೂ ಕಾವ್ಯ ಸ್ಪರ್ಧೆ ನಡೆಯಲಿದೆ. ಆಸಕ್ತ ಶಾಲೆಯ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಭಾಗವಹಿಸುವ ಬಗ್ಗೆ ಜುಲೈ 10ರೊಳಗೆ 9972127937 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.