ಬೆಂಗಳೂರು: ರಥಸಪ್ತಮಿ ಹಬ್ಬದ ಪ್ರಯುಕ್ತ ಆಡುಗೋಡಿ ಮುಖ್ಯರಸ್ತೆಯಲ್ಲಿ ಸೋಮವಾರ (ಜ.26) ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯುವುದರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಆಡುಗೋಡಿ ಮುಖ್ಯರಸ್ತೆಯಲ್ಲಿ ಸಂಜೆ 6 ಗಂಟೆಯಿಂದ ಮಂಗಳವಾರ ಬೆಳಿಗ್ಗೆ 10 ಗಂಟೆವರೆಗೆ ವಾಹನ ಸಂಚಾರಕ್ಕೆ ಅವಕಾಶವಿಲ್ಲ.
ಮಡಿವಾಳ ಮತ್ತು ಹೊಸೂರು ರಸ್ತೆ ಮಾರ್ಗವಾಗಿ ಆಡುಗೋಡಿ ಮುಖ್ಯರಸ್ತೆಗೆ ಹೋಗುವ ವಾಹನಗಳು ಡಾ.ಎಂ.ಎಚ್.ಮರೀಗೌಡ ರಸ್ತೆ, ಬೆಂಗಳೂರು ಡೇರಿ ಜಂಕ್ಷನ್ ಮೂಲಕ ಸಾಗಬೇಕು. ನಂತರ ಕೆ.ಎಚ್.ರಸ್ತೆಗೆ ಬಂದು ಬಲಕ್ಕೆ ತಿರುಗಿ ಬನ್ನೇರುಘಟ್ಟ ರಸ್ತೆಗೆ ಹೋಗಬೇಕು.
ಕೋರಮಂಗಲ 80 ಅಡಿ ರಸ್ತೆಯಿಂದ ಬರುವ ವಾಹನಗಳು ಯುಕೋ ಬ್ಯಾಂಕ್ ಜಂಕ್ಷನ್ನಲ್ಲಿ ಬಲ ತಿರುವು ಪಡೆಯುವಂತಿಲ್ಲ. ಬದಲಿಗೆ ಮಡಿವಾಳ ಚೆಕ್ಪೋಸ್ಟ್ ಕಡೆಗೆ ಸಾಗಿ ಮರೀಗೌಡ ರಸ್ತೆ ಅಥವಾ ಕೋರಮಂಗಲ 80 ಅಡಿ ರಸ್ತೆ ಮೂಲಕ ಹೋಗಬೇಕು.
ಅಶೋಕನಗರ, ನೀಲಸಂದ್ರ ಮತ್ತು ಸಿಎಂಪಿ ಜಂಕ್ಷನ್ ಕಡೆಯಿಂದ ಹೋಗುವ ವಾಹನಗಳು ಬನ್ನೇರುಘಟ್ಟ ರಸ್ತೆ, ಡೇರಿ ಜಂಕ್ಷನ್, ಮರೀಗೌಡ ರಸ್ತೆ ಮಾರ್ಗವಾಗಿ ಸಂಚರಿಸಬೇಕು.
ವಿಲ್ಸನ್ಗಾರ್ಡನ್, ಶಾಂತಿನಗರ ಮತ್ತು ಮೈಕೊ ಲಿಂಕ್ ರಸ್ತೆಯಿಂದ ಹೋಗುವ ವಾಹನಗಳು ಮೈಕೊ ಬಂಡೆ ಜಂಕ್ಷನ್ನಲ್ಲಿ ಬನ್ನೇರುಘಟ್ಟ ರಸ್ತೆಗೆ ಸಾಗಬೇಕು. ಬಳಿಕ ಡೇರಿ ಜಂಕ್ಷನ್, ಮರೀಗೌಡ ರಸ್ತೆಯಲ್ಲಿ ಹೋಗಬೇಕು.
80 ಅಡಿ ಪೆರಿಫೆರಲ್ ರಸ್ತೆಯ ಪಾಸ್ಪೋರ್ಟ್ ಕಚೇರಿ ಕಡೆಯಿಂದ ಬರುವ ವಾಹನಗಳು ಕೋರಮಂಗಲ ಎಂಟನೇ ಬ್ಲಾಕ್ನ ಶಿವ ಚಿತ್ರಮಂದಿರದ ಬಳಿ ವಿವೇಕನಗರ, ನೀಲಸಂದ್ರ ಕಡೆಗೆ ಹೋಗಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನ ಸವಾರರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.