ADVERTISEMENT

ಆಭರಣ ವ್ಯಾಪಾರಿ ಕೊಲೆ; ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ಬೆಂಗಳೂರು: ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದ ಆಂಧ್ರಪ್ರದೇಶದ ವಿಶಾಖಪಟ್ಟಣದ ಆಭರಣ ವ್ಯಾಪಾರಿ ಮನೋಜ್ ಕುಮಾರ್ ಗ್ರಂಥಿ (42) ಅವರ ಶವ ಮೂಡಿಗೆರೆ ಸಮೀಪದ ಕೊಟ್ಟಿಗೆಹಾರದ ಬಳಿ ಚಾರ್ಮಾಡಿ ಘಾಟ್‌ನಲ್ಲಿ (ಸೋಮನಕಾಡು) ಪತ್ತೆಯಾಗಿದ್ದು, ಅವರನ್ನು ಕೊಲೆ ಮಾಡಿ ಮೂರು ಕೋಟಿ ರೂ ಮೌಲ್ಯದ ಆಭರಣ ದೋಚಿದ್ದ ಮೂರು ಮಂದಿ ಆರೋಪಿಗಳನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕಾರ್ ಝೋನ್ ರೆಂಟ್ ಸಂಸ್ಥೆಯ ಕಾರು ಚಾಲಕ ಹಾಸನದ ಅರಕಲಗೂಡಿನ ಕೆ.ವಿ. ರವಿಕುಮಾರ್ (26), ಆತನ ಸ್ನೇಹಿತ ಗುಬ್ಬಿ ತಾಲ್ಲೂಕಿನ ಮಣಕುಪ್ಪೆಯ ಶಿವಕುಮಾರ್ (26) ಮತ್ತು ಕೃಷ್ಣೇಗೌಡ (28) ಬಂಧಿತರು. ಕೊಟ್ಟಿಗೆಹಾರದ ಬಳಿ ಎಸೆದಿದ್ದ ಶವ ಮತ್ತು ಆರೋಪಿಗಳು ದೋಚಿದ್ದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

`ಮನೋಜ್ ವಿಶಾಖಪಟ್ಟಣದಲ್ಲಿರುವ ವೈಭವ್ ಜ್ಯುವೆಲರ್ಸ್‌ನ ಮಾಲೀಕ. ಅಂಗಡಿಯ ಜಾಹೀರಾತು ಸಿದ್ಧಪಡಿಸಲು ನಿರ್ಧರಿಸಿದ್ದ ಅವರು ಪುರಾತನ ಕಾಲದ ಮಾದರಿಯ ಆಭರಣಗಳನ್ನು ಸಂಗ್ರಹಿಸುತ್ತಿದ್ದರು. ಆ ಆಭರಣವನ್ನು ಜಾಹೀರಾತು ರೂಪದರ್ಶಿಯರಿಗೆ ತೊಡಿಸಿ ಜಾಹೀರಾತು ತಯಾರಿಸುವುದು ಅವರ ಉದ್ದೇಶವಾಗಿತ್ತು. ಅದಕ್ಕಾಗಿ ಅವರು ಮೊದಲು ರಾಜಸ್ತಾನಕ್ಕೆ ಹೋಗಿದ್ದರು. ಅಲ್ಲಿ ಆಭರಣಗಳನ್ನು ಖರೀದಿಸಿ  ಫೆ.6ರಂದು ಬೆಂಗಳೂರಿಗೆ ಬಂದಿದ್ದರು~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.