ADVERTISEMENT

ಆಯುರ್ವೇದ ಪದ್ಧತಿ- ಜಾಗೃತಿ ಅಗತ್ಯ

ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸಚಿವೆ ಶೋಭಾ

​ಪ್ರಜಾವಾಣಿ ವಾರ್ತೆ
Published 6 ಜನವರಿ 2013, 20:21 IST
Last Updated 6 ಜನವರಿ 2013, 20:21 IST
ಯಲಹಂಕ ಸಮೀಪದ ನ್ಯಾಯಾಂಗ ಬಡಾವಣೆಯ ಜ್ಞಾನದೀಪಿಕಾ ಭಾರ್ಗವಿ ಶಿಕ್ಷಣ ಕೇಂದ್ರದಲ್ಲಿ ಭಾನುವಾರ ನಡೆದ ಯೋಗ, ಆಯುರ್ವೇದ ಮತ್ತು ಅಧ್ಯಾತ್ಮ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ರಾಜ್ಯಸಭಾ ಸದಸ್ಯ ಎಂ.ರಾಮಾ ಜೋಯಿಸ್ ಉದ್ಘಾಟಿಸಿದರು. ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಪಟ್ಟನಾಯಕನಹಳ್ಳಿ ಸ್ಫಟಿಕಪುರ ಮಹಾಸಂಸ್ಥಾನಮಠದ ನಂಜಾವದೂತ ಸ್ವಾಮೀಜಿ ಚಿತ್ರದಲ್ಲಿದ್ದಾರೆ
ಯಲಹಂಕ ಸಮೀಪದ ನ್ಯಾಯಾಂಗ ಬಡಾವಣೆಯ ಜ್ಞಾನದೀಪಿಕಾ ಭಾರ್ಗವಿ ಶಿಕ್ಷಣ ಕೇಂದ್ರದಲ್ಲಿ ಭಾನುವಾರ ನಡೆದ ಯೋಗ, ಆಯುರ್ವೇದ ಮತ್ತು ಅಧ್ಯಾತ್ಮ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ರಾಜ್ಯಸಭಾ ಸದಸ್ಯ ಎಂ.ರಾಮಾ ಜೋಯಿಸ್ ಉದ್ಘಾಟಿಸಿದರು. ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಪಟ್ಟನಾಯಕನಹಳ್ಳಿ ಸ್ಫಟಿಕಪುರ ಮಹಾಸಂಸ್ಥಾನಮಠದ ನಂಜಾವದೂತ ಸ್ವಾಮೀಜಿ ಚಿತ್ರದಲ್ಲಿದ್ದಾರೆ   

ಯಲಹಂಕ: `ವಿದೇಶಿ ಔಷಧಿಗಳ ಪ್ರಚಾರದ ಅಬ್ಬರದ ನಡುವೆ ಆಯುರ್ವೇದ ಔಷಧಿಗಳು ಪ್ರಚಾರ ಮತ್ತು ತಿಳಿವಳಿಕೆಯ ಕೊರತೆಯಿಂದ ಜನರನ್ನು ತಲುಪುತ್ತಿಲ್ಲ' ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಸಂಶೋಧನೆ ಮತ್ತು ಅನುಸಂಧಾನ ಆರೋಗ್ಯ ಟ್ರಸ್ಟ್ ಹಾಗೂ ರಾಮಾನುಜಂ ಮಿಷನ್ ಟ್ರಸ್ಟ್‌ನ (ಚೆನ್ನೈ) ಆಶ್ರಯದಲ್ಲಿ ನ್ಯಾಯಾಂಗ ಬಡಾವಣೆಯ ಜ್ಞಾನದೀಪಿಕಾ ಭಾರ್ಗವಿ ಶಿಕ್ಷಣ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಯೋಗ, ಆಯುರ್ವೇದ ಮತ್ತು ಅಧ್ಯಾತ್ಮ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.

`ಆಯುರ್ವೇದ ಔಷಧಿಗಳಿಗೆ ಮಾತ್ರೆ ಮತ್ತು ಶಸ್ತ್ರಚಿಕಿತ್ಸೆ ಇಲ್ಲದೆ ಕಾಯಿಲೆಯನ್ನು ಗುಣಪಡಿಸುವ ಶಕ್ತಿಯಿದೆ. ಈ ಪದ್ಧತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೆಚ್ಚಾಗಿ ಬಳಕೆಗೆ ತರಬೇಕಾದ ಅಗತ್ಯವಿದೆ' ಎಂದರು.

`ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅತ್ಯಾಚಾರ, ಸಮಾಜದ್ರೋಹಿ ಕೆಲಸಗಳಿಗೆ ಯೋಗ ಕಡಿವಾಣ ಹಾಕಬಲ್ಲದು. ಯೋಗದಿಂದ ಮನಸ್ಸು ಮತ್ತು ಇಂದ್ರಿಯಗಳ ನಿಗ್ರಹ ಸಾಧ್ಯವಿದೆ. ಈ ದಿಸೆಯಲ್ಲಿ ಯೋಗ ಅನುಕರಣೆ ಒಳ್ಳೆಯದು' ಎಂದು ಅವರು ಹೇಳಿದರು.

`ಪತ್ನಿಯನ್ನು ಹೊರತುಪಡಿಸಿ ಉಳಿದವರನ್ನೆಲ್ಲ ತಾಯಿ ಎಂದು ಭಾವಿಸುವ ನಮ್ಮ ದೇಶದಲ್ಲಿ ಅತ್ಯಾಚಾರದಂತಹ ಘಟನೆಗಳು ತಲ್ಲೆತಗ್ಗಿಸುವಂತೆ ಮಾಡುತ್ತಿದ್ದು, ನಮ್ಮ ವ್ಯವಸ್ಥೆ ಎಲ್ಲೋ ದಾರಿ ತಪ್ಪುತ್ತಿದೆ. ಶಿಕ್ಷಣ, ಆಚಾರ ವಿಚಾರಗಳಲ್ಲಿ ವ್ಯತ್ಯಾಸಗಳಾಗುತ್ತಿದ್ದು, ಈಗಲಾದರೂ ಎಚ್ಚೆತ್ತುಕೊಂಡು ನಮ್ಮ ಗೌರವಾನ್ವಿತ ವಿಚಾರಗಳನ್ನು ಪ್ರಚಾರಪಡಿಸುವಂತಹ ಕಾರ್ಯಾಗಾರಗಳು ಹೆಚ್ಚಾಗಿ ನಡೆಯಬೇಕು' ಎಂದು ಆಶಿಸಿದರು.

ರಾಜ್ಯಸಭಾ ಸದಸ್ಯ ಎಂ.ರಾಮಾಜೋಯಿಸ್ ಮಾತನಾಡಿ, `ಶಿಕ್ಷಣ ವ್ಯವಸ್ಥೆಯಲ್ಲಿ ಅಧ್ಯಾತ್ಮವನ್ನು ಅಳವಡಿಸುವ ಮೂಲಕ ಯುವಜನರನ್ನು ಜೀವನದಲ್ಲಿ ಯಶಸ್ಸಿನತ್ತ ಮುನ್ನಡೆಸಲು ಸೂಕ್ತ ರೀತಿಯ ಮಾರ್ಗದರ್ಶನ ನೀಡಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.