ಬೆಂಗಳೂರು: ‘ತನಿಖಾ ಆಯೋಗಗಳು ಕೊಡುವ ವರದಿಗಳ ಮೇಲೆ ಈ ಸರ್ಕಾರಕ್ಕೆ ವಿಶ್ವಾಸವೇ ಇಲ್ಲ. ಹೀಗಾಗಿ ಅರ್ಕಾವತಿ ಡಿನೋಟಿಫಿಕೇಷನ್ ಅಕ್ರಮ ಸಂಬಂಧ ತನಿಖೆ ನಡೆಸಲು ನೇಮಿಸಿರುವ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ನೇತೃತ್ವದ ಆಯೋಗವನ್ನು ರದ್ದುಪಡಿಸಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಗುರುವಾರ ಇಲ್ಲಿ ಆಗ್ರಹಪಡಿಸಿದರು.
‘ಜಿ–ಕೋಟಾ ನಿವೇಶನಗಳ ಅಕ್ರಮ ಹಂಚಿಕೆ ಸಂಬಂಧ ತನಿಖೆ ನಡೆಸಿದ್ದ ನ್ಯಾಯಮೂರ್ತಿ ಪದ್ಮರಾಜ್ ಆಯೋಗದ ವರದಿಯನ್ನೇ ತಿರಸ್ಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇನ್ನು ತಮ್ಮ ರಕ್ಷಣೆ ಸಲುವಾಗಿ ರಚಿಸಿಕೊಂಡಿರುವ ಕೆಂಪಣ್ಣ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುತ್ತಾರೆಯೇ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಪದ್ಮರಾಜ್ ಆಯೋಗ ಕೊಟ್ಟ ವರದಿ ಹೈಕೋರ್ಟ್ ಮಾರ್ಗಸೂಚಿ ಪ್ರಕಾರ ಇಲ್ಲ’ ಎಂದು ಸಬೂಬು ಹೇಳಿ, ಮತ್ತೊಂದು ಸಮಿತಿ ರಚಿಸಲಾಗಿದೆ. ಇದೇ ಪರಿಸ್ಥಿತಿ ಕೆಂಪಣ್ಣ ಆಯೋಗದ ವರದಿಗೂ ಬರುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಕಾಲಹರಣ ಮಾಡಲು ಮತ್ತು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿಯವರು ಕೆಂಪಣ್ಣ ಆಯೋಗ ರಚಿಸಿದ್ದಾರೆ’ ಎಂದು ದೂರಿದರು.
ಕೋರ್ಟ್ನಲ್ಲಿ ಆಗಲಿ: ‘ಮುಖ್ಯಮಂತ್ರಿಗಳೇ ಯಾವ ಆಯೋಗವೂ ಬೇಡ. ಅದರ ಬದಲು ಅರ್ಕಾವತಿಯಲ್ಲಿ ಅಕ್ರಮ ನಡೆದಿದೆಯೊ ಇಲ್ಲವೊ ಎನ್ನುವುದು ಕೋರ್ಟ್ನಲ್ಲೇ ತೀರ್ಮಾನ ಆಗಲಿ. ನನ್ನ ತಪ್ಪಿದ್ದರೆ ನನಗೂ ಶಿಕ್ಷೆ ಆಗಲಿ. ಇಂತಹ ಆಯೋಗಗಳನ್ನು ರಚಿಸುವುದರಿಂದ ಅಕ್ರಮ ಎಸಗಿದವರಿಗೆ ಶಿಕ್ಷೆ ಆಗಲ್ಲ. ಕಾಲಹರಣಕ್ಕೆ ತೆರಿಗೆ ಹಣ ಪೋಲು ಮಾಡುವುದು ಎಷ್ಟರಮಟ್ಟಿಗೆ’ ಎಂದು ಅವರು ಪ್ರಶ್ನಿಸಿದರು.
‘ಅನುಭವ ಇರಲಿಲ್ಲ..’
ನನ್ನ ವಿರುದ್ಧವೂ ಡಿನೋಟಿಫಿಕೇಷನ್ ಆಪಾದನೆ ಇದೆ. ಆಕಸ್ಮಿಕವಾಗಿ ಮುಖ್ಯಮಂತ್ರಿಯಾದ ನನಗೆ ಆಡಳಿತದ ಅನುಭವ ಇರಲಿಲ್ಲ. ಕಡತ ನೋಡುವ ತಿಳಿವಳಿಕೆಯೂ ಇರಲಿಲ್ಲ. ಈಗಿನ ಅನುಭವ ಆಗ ಇದ್ದಿದ್ದರೆ ಅಂತಹ ಕಡತಗಳಿಗೆ ಎಚ್ಚರಿಕೆಯಿಂದ ಸಹಿ ಹಾಕುತ್ತಿದ್ದೆ. ಒಳ್ಳೆ ಉದ್ದೇಶದಿಂದ ವಿವೇಚನಾಧಿಕಾರ ಬಳಸಿ ಡಿನೋಟಿಫೈ ಮಾಡಿದ್ದೇನೆ. ತಪ್ಪಾಗಿದ್ದರೆ ಅದನ್ನು ಕೋರ್ಟ್ ಹೇಳಲಿ.
– ಎಚ್.ಡಿ.ಕುಮಾರಸ್ವಾಮಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.