ADVERTISEMENT

ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ

ಡಿ.30ರಂದು ನಟ ವಿಷ್ಣುವರ್ಧನ್‌ ಪುಣ್ಯತಿಥಿ: ಕಿರುಚಿತ್ರ, ಸಾಕ್ಷ್ಯಚಿತ್ರ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 20:14 IST
Last Updated 23 ಡಿಸೆಂಬರ್ 2013, 20:14 IST

ಬೆಂಗಳೂರು: ನಟ ಡಾ. ವಿಷ್ಣುವರ್ಧನ್ ಅವರ ನಾಲ್ಕನೇ ಪುಣ್ಯ ತಿಥಿಯ ಅಂಗವಾಗಿ ಇದೇ ೩೦ರಂದು ಕಾಮಿಕ್ಸ್ ಪುಸ್ತಕ ಸರಣಿ ಬಿಡುಗಡೆ, ಬೃಹತ್ ಆರೋಗ್ಯ ತಪಾಸಣೆ ಶಿಬಿರ, ಕಿರುಚಿತ್ರ– ಸಾಕ್ಷ್ಯಚಿತ್ರ ಸ್ಪರ್ಧೆ ಇನ್ನಿತರ ಕಾರ್ಯ­ಕ್ರಮ­ಗಳನ್ನು ಆಯೋಜಿ­ಸಲಾಗಿದೆ.
ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ಅಳಿಯ ಅನಿರುದ್ಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತ ವಿವರ ನೀಡಿ, ಪ್ರತಿ ವರ್ಷದಂತೆ ಈ ಬಾರಿಯೂ ವಿಷ್ಣು ಸ್ಮರಣೆಯಲ್ಲಿ ಕಾರ್ಯಕ್ರಮ ಏರ್ಪಡಿಸಲು ಹಲವು ಸಂಸ್ಥೆಗಳು ಮುಂದಾಗಿವೆ ಎಂದರು.

ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ರೋಟರಿ ಕ್ಲಬ್‌ ವತಿಯಿಂದ ಬೃಹತ್ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ಬಗೆಯ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ತಪಾಸಣೆ ನಡೆಸಲಾಗುವುದು. ಅಗತ್ಯವಿರುವ ರೋಗಿಗಳಿಗೆ ಅಲ್ಪ ವೆಚ್ಚದಲ್ಲಿ ಡಯಾ­ಲಿಸಿಸ್ ಮಾಡುವುದು; ಪೋಲಿಯೋ­ದಿಂದ ಕಾಲುಗಳ ಸ್ವಾಧೀನ ಕಳೆದು­ಕೊಂಡಿ­ರುವವರಿಗೆ ಕೃತಕ ಕಾಲು ಅಳವಡಿಸುವುದು, ಉಚಿತ ದಂತ ತಪಾ­ಸಣೆ ಹಾಗೂ ಚಿಕಿತ್ಸೆ ಕೈಗೊಳ್ಳ­ಲಾಗು­ವುದು ಎಂದು ಅನುರುದ್ಧ ಹೇಳಿದರು.

‘ವಾಸನ್‌ ಐ ಕೇರ್‌ ಆಸ್ಪತ್ರೆ’ಯು ನೇತ್ರ ತಪಾಸಣೆ ನಡೆಸಲಿದ್ದು, ಅಗತ್ಯ­ವಿದ್ದರೆ ಉಚಿತವಾಗಿ ಶಸ್ತ್ರಚಿಕಿತ್ಸೆ­ಯನ್ನೂ ಮಾಡಲಿದೆ. ಡಿ.ಎ.ಪಾಂಡು ಸ್ಮಾರಕ ಆರ್‌.ವಿ. ಡೆಂಟಲ್ ಕಾಲೇಜಿನ ನೇತೃತ್ವದಲ್ಲಿ ದಂತ ಆರೋಗ್ಯ ಕುರಿತು ಜಾಗೃತಿ ಅಭಿಯಾನ, ತಪಾಸಣೆ, ಆಯೋಜಿಸ­ಲಾಗಿದೆ. ಇದ­ರೊಂದಿಗೆ ಸಂಜೀವಿನಿ ನ್ಯೂರೊಥೆರಪಿ ಆರೋಗ್ಯ ಕೇಂದ್ರವು ಔಷಧಿರಹಿತ ಚಿಕಿತ್ಸೆ ಬಗ್ಗೆ ಹಾಗೂ ಸ್ತನ ಕ್ಯಾನ್ಸರ್ ಕುರಿತು ಪೂರ್ಣಸುಧಾ ಕ್ಯಾನ್ಸರ್ ಫೌಂಡೇಶನ್ ಜನರಿಗೆ ಮಾಹಿತಿ ನೀಡಲಿದೆ.

ನಾರಾಯಣ ಹೃದಯಾ­ಲಯ­ದಿಂದ ಹೃದಯ ತಪಾಸಣೆ ಆಯೋ­ಜಿ­ಸ­­ಲಾಗಿದ್ದು, ಇದು ಜನವರಿ ತಿಂಗಳಿಡೀ ನಡೆಯಲಿದೆ. ಹುಬ್ಬಳ್ಳಿ, ಕೋಲಾರ, ದಾವಣೆಗೆರೆ ಇತರ ಕಡೆಗಳಲ್ಲೂ ಶಿಬಿರ ಏರ್ಪಡಿಸ­ಲಾಗಿದೆ. ಡಾ. ವಿಷ್ಣು ರಕ್ತವಾಹಿನಿ ಪ್ರತಿಷ್ಠಾನದ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

  ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಲು ಸಿದ್ಧವಿರುವ ಅಭಿಮಾನಿಗಳು ಹೆಸರು ನೋಂದಾಯಿಸಿಕೊಳ್ಳಲಿದ್ದಾರೆ. ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿ­ಗಳಾದ ನಾಗೇಂದ್ರ ಪ್ರಸಾದ್, ಡಾ. ಹರಿಕಿರಣ್, ರವಿ ಜಾಲಿಹಾಳ, ಸೀಮಾ, ಡಾ. ನಾರಾಯಣಸ್ವಾಮಿ, ಡಾ. ಶ್ರೀನಿ­ವಾಸ್, ಡಾ. ಸೋಮಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT