ADVERTISEMENT

ಆರ್ಥಿಕ ನಷ್ಟ: ಅಧಿಕಾರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 19:24 IST
Last Updated 24 ಜೂನ್ 2013, 19:24 IST

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ (ಹಣಕಾಸು) ಎಚ್.ಎಂ. ನಟರಾಜ್, ಈ ಹಿಂದೆ ಬಿಬಿಎಂಪಿಯಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದಾಗ ಎಸಗಿದ ಕರ್ತವ್ಯ ಲೋಪದಿಂದ ರೂ 1.22 ಕೋಟಿ ಆರ್ಥಿಕ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಬಿಬಿಎಂಪಿಯಿಂದ ನಟರಾಜ್ ಅವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ರಾಜ್ಯ ಹಣಕಾಸು ಇಲಾಖೆಯಿಂದ ನಟರಾಜ್ ಎರವಲು ಸೇವೆ ಮೇಲೆ ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸಿದ್ದ ಹಣವನ್ನು ಜೆ.ಪಿ.ನಗರದ ಆಕ್ಸಿಸ್ ಬ್ಯಾಂಕ್‌ನಲ್ಲಿ ಭದ್ರತಾ ಠೇವಣಿಯಾಗಿ ಇಡಲಾಗಿತ್ತು.

`2007ರ ಜನವರಿ 1ರಿಂದ 2008ರ ಅಕ್ಟೋಬರ್ 14ರವರೆಗೆ ಠೇವಣಿ ಮೇಲಿನ ಬಡ್ಡಿ ಮೊತ್ತ ಪಾವತಿಸಿದ್ದ ಬ್ಯಾಂಕ್, ಬಳಿಕ ಪಾವತಿ ಮಾಡಿರಲಿಲ್ಲ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿ ತೋರಿದ್ದರಿಂದ ಬಿಬಿಎಂಪಿಗೆ ರೂ 1.22 ಕೋಟಿ ನಷ್ಟವಾಗಿದೆ' ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.

`2008ರ ಅಕ್ಟೋಬರ್ 14ರಿಂದ ನಂತರದ ದಿನಗಳ ಬಡ್ಡಿ ಹಣವನ್ನು ಪಾವತಿ ಮಾಡಬೇಕು ಎಂದು ಮುಖ್ಯ ಹಣಕಾಸು ಅಧಿಕಾರಿಗಳು ಆಕ್ಸಿಸ್ ಬ್ಯಾಂಕ್ ಮುಖ್ಯಸ್ಥರಿಗೆ 2010ರ ಸೆಪ್ಟೆಂಬರ್ 9ರಂದು ಪತ್ರ ಬರೆದಿದ್ದರು. ಭದ್ರತಾ ಠೇವಣಿಯನ್ನು ಮುಕ್ತಾಯಗೊಳಿಸಿ ಚಾಲ್ತಿ ಖಾತೆಗೆ ಹಣ ವರ್ಗಾವಣೆ ಮಾಡಿದ್ದರಿಂದ ಬಡ್ಡಿ ನೀಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಮುಖ್ಯಸ್ಥರು ಉತ್ತರಿಸಿದ್ದರು. ಈ ವ್ಯವಹಾರ ನಡೆದ ಅವಧಿಯಲ್ಲಿ ನಟರಾಜ್ ಅವರೇ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದರು' ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.