ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 2013-14ನೇ ಸಾಲಿನಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ದಾಖಲಾತಿಗಾಗಿ ಜನವರಿ 5ರಿಂದ ಅರ್ಜಿಗಳನ್ನು ವಿತರಿಸಲಾಗುವುದು.
ವಿದ್ಯಾರ್ಥಿಗಳ ದಾಖಲಾತಿಗಾಗಿ ಶಾಲಾವಾರು ಲಭ್ಯವಿರುವ ಸೀಟುಗಳ ವಿವರವನ್ನುschooleducation.kar.nic.inಹಾಗೂಗ್ರಾಮ ಪಂಚಾಯ್ತಿ ವೆಬ್ಸೈಟ್ಗಳಲ್ಲಿ ಜ.5ರಂದು ಪ್ರಕಟಿಸಲಾಗುವುದು. ಸಾರ್ವಜನಿಕರು ಮಕ್ಕಳನ್ನು ನೆರೆಹೊರೆಯ ಶಾಲೆಗಳಲ್ಲಿ ದಾಖಲಿಸಲು ಅರ್ಜಿಗಳನ್ನು ಶಾಲೆಗಳಿಂದ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಅಥವಾ ಇಲಾಖೆಯ ವೆಬ್ಸೈಟ್ನಿಂದ ಪಡೆದು ಭರ್ತಿಮಾಡಿ ಅಗತ್ಯ ದಾಖಲೆಗಳೊಂದಿಗೆ ಶಾಲೆಗಳಿಗೆ ಸಲ್ಲಿಸಿ ಸ್ವೀಕೃತಿಯನ್ನು ಪಡೆಯಬೇಕು. ಶಾಲೆಗಳಲ್ಲಿ ಅರ್ಜಿ ಸ್ವೀಕರಿಸಲು ನಿರಾಕರಿಸಿದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬಹುದು.
ಶಾಲೆಯ ದಾಖಲಾತಿ ಕೋರಿ ಪೋಷಕರು ಅರ್ಜಿಗಳನ್ನು ಜ.7ರಿಂದ ಫೆಬ್ರುವರಿ 5ರ ವರೆಗೂ ಸಲ್ಲಿಸಬಹುದು. ಕಾಯ್ದೆಯಡಿಯಲ್ಲಿ ನಿಗದಿಪಡಿಸಿದ ಸೀಟುಗಳಿಗಿಂತ ಹೆಚ್ಚು ಅರ್ಜಿಗಳು ಸ್ವೀಕೃತಿಯಾದಲ್ಲಿ ಶಿಕ್ಷಣ ಇಲಾಖೆಯ ಮಾರ್ಗದರ್ಶನದಂತೆ ಪ್ರಥಮ ಆದ್ಯತೆ ಮೇಲೆ ಶಾಲೆಯ ನೆರೆಹೊರೆಯ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು.
ಈ ರೀತಿ ಉಚಿತವಾಗಿ ನೀಡಿದ ದಾಖಲಾತಿಗೆ ಸಂಬಂಧಿಸಿದಂತೆ ಪೋಷಕರಿಂದ ಯಾವುದೇ ಶುಲ್ಕ ಪಡೆಯಬಾರದು. ಶಾಲೆಯ ಮುಖ್ಯ ಶಿಕ್ಷಕರಾಗಲಿ ಅಥವಾ ಆಡಳಿತ ಮಂಡಳಿಯವರಾಗಲೀ ಪ್ರವೇಶ ಅರ್ಜಿಯನ್ನಾಗಲೀ, ದಾಖಲಾತಿಯನ್ನಾಗಲೀ ನಿರಾಕರಿಸುವಂತಿಲ್ಲ.ಸಮಸ್ಯೆಗಳು ಇದ್ದಲ್ಲಿ ಆಯಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಥವಾ ಜಿಲ್ಲಾ ಉಪನಿರ್ದೇಶಕರನ್ನು 1800-425-11004 (ಉಚಿತ ಕರೆ) ಮುಖಾಂತರ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.