ADVERTISEMENT

ಇಂಗ್ಲಿಷ್ ಅನ್ನ ನೀಡುವ ಭಾಷೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ನೆಲಮಂಗಲ: `ಜಾಗತೀಕರಣದ ಮಾರು ವೇಷದಲ್ಲಿ ಅವತರಿಸಿದ ಇಂಗ್ಲಿಷ್ ಕಲಿಕೆಯು ಇಂದು ಅತ್ಯಂತ ಪ್ರಸ್ತುತವಾಗಿದೆ. ದುಡಿಯುವ ಕೈಗೆ ಕೆಲಸ ಮತ್ತು ಹಸಿದ ಹೊಟ್ಟೆಯ ಅನ್ನಕ್ಕೆ ಆಂಗ್ಲ ಭಾಷೆಯ ಕಲಿಕೆ ಅನಿವಾರ್ಯ~ ಎಂದು ನಿವೃತ್ತ ತಾಲ್ಲೂಕು ವೈದ್ಯಾಧಿಕಾರಿ ಜಿ.ಎ. ವೆಂಕಟೇಶಲು ತಿಳಿಸಿದರು.

 ತಾಲ್ಲೂಕಿನ ಯಂಟಗಾನಹಳ್ಳಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಕಾಲೇಜಿನಲ್ಲಿ ಆಯೋಜಿಸಿದ್ದ ಒಂದು ದಿನದ ಆಂಗ್ಲ ಭಾಷಾ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲಯನ್ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಸುರೇಶ್ ಆಳ್ವ ಮಾತನಾಡಿ, `ಆಂಗ್ಲ ಭಾಷೆಯ ಬಗ್ಗೆ ಕೀಳರಿಮೆ ಹೊಂದಿದ ಗ್ರಾಮೀಣ ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್ ಪ್ರಾಯೋಜಿತ ಇಂಗ್ಲಿಷ್ ಕಲಿಕೆಯ ಈ ಯೋಜನೆಯು ಬಡ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಇದು ನಿರಂತರವಾಗಿ ನಡೆಯಲಿ~ ಎಂದರು. 

ಸಾಹಿತಿ ತ್ಯಾಮಗೊಂಡ್ಲು ಅಂಬರೀಷ್, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಡಿ.ಶ್ರೀನಿವಾಸಯ್ಯ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಬಿ.ಮಧುಸೂಧನ್ ಪ್ರಾಸ್ತಾವಿಕವಾಗಿ ಮಾತನಾಡಿ, ಆಂಗ್ಲ ಭಾಷಾ ಬೋಧನೆಯನ್ನು ಭಾಷಾ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ರಜಾ ದಿನಗಳಲ್ಲಿ ನಿರಂತರವಾಗಿ ನಡೆಸಲಾಗುವುದು~ ಎಂದರು.

ಘಟಕದ 96 ಸ್ವಯಂಸೇವಕರು ಭಾಗವಹಿಸಿದ್ದ ಕಾರ್ಯಗಾರದಲ್ಲಿ ಹಿರಿಯ ಉಪನ್ಯಾಸಕ ಟಿ.ವಿ.ಪ್ರಕಾಶ್, ತ್ಯಾಮಗೊಂಡ್ಲು ಅಂಬರೀಷ್ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು. ಸ್ವಯಂಸೇವಕ ಕಿರಣ್ ಸ್ವಾಗತಿಸಿ, ವಸಂತ್‌ಕುಮಾರ್ ವಂದಿಸಿದರು.

ಅಸ್ತಮಾಗೆ ಉಚಿತ ಔಷಧಿ ವಿತರಣೆ: ವನಕಲ್ಲು ಮಲ್ಲೇಶ್ವರ ಕ್ಷೇತ್ರದ ಸಿದ್ದಯೋಗಾನಂದ ಸ್ವಾಮೀಜಿ ಅವರ ಸಂಕಲ್ಪದಂತೆ ಭಾನುವಾರ ತಾಲ್ಲೂಕಿನ ತ್ಯಾಮಗೊಂಡ್ಲು ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಅಸ್ತಮಾ, ಶೀತ ಮತ್ತು ಅಲರ್ಜಿಗೆ ಉಚಿತ ಔಷಧಿ ವಿತರಿಸಲಾಯಿತು.

ಸುತ್ತಲಿನ ಗ್ರಾಮ ಹಾಗೂ ಬಹೂದೂರದ ಪಟ್ಟಣಗಳಿಂದ ನೂರಾರು ಜನ ಆಗಮಿಸಿ ಔಷಧಿ ಸ್ವೀಕರಿಸಿದರು. ಉದ್ಯಮಿ ಸುರೇಂದ್ರನಾಥ್ ಔಷಧಿ ವಿತರಣೆ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.