ADVERTISEMENT

ಇಂದು ಪೌರ ಕಾರ್ಮಿಕರ ಧರಣಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:35 IST
Last Updated 18 ಏಪ್ರಿಲ್ 2012, 19:35 IST

ಬೆಂಗಳೂರು: `ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಪೌರ ಕಾರ್ಮಿಕರು ಸ್ವಚ್ಛತಾ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಗುರುವಾರ (ಏ.19) ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಿದ್ದಾರೆ.

ಧರಣಿಯಲ್ಲಿ  ಸುಮಾರು 15 ಸಾವಿರ ಪೌರಕಾರ್ಮಿಕರು ಭಾಗವಹಿಸುವರು~ ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಅಧ್ಯಕ್ಷ ನಾರಾಯಣ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `6,600 ರೂಪಾಯಿ ಕನಿಷ್ಠ ವೇತನ ನೀಡುವವರೆಗೆ ಸತ್ಯಾಗ್ರಹವನ್ನು ಮುಂದುವರೆಸಲಾಗುವುದು~ ಎಂದು ತಿಳಿಸಿದರು.

`ಕಾರ್ಮಿಕ ಇಲಾಖೆಯು 2010 ಸೆಪ್ಟೆಂಬರ್ 21ರಂದು 6,600 ರೂಪಾಯಿ ಕನಿಷ್ಠ ವೇತನ ನೀಡುವಂತೆ ಆದೇಶವನ್ನು ಹೊರಡಿಸಲಾಗಿತ್ತು, ಸರ್ಕಾರ ಈ ಆದೇಶವನ್ನು ಪಾಲನೆ ಮಾಡಿಲ್ಲ. ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳೂ ಈ ಆದೇಶವನ್ನು ಜಾರಿಗೊಳಿಸದೇ ವಂಚನೆ ಮಾಡುತ್ತಿವೆ~ ಎಂದು ಅವರು ದೂರಿದರು.

`ಗುತ್ತಿಗೆ ಕಾರ್ಮಿಕರಿಗೆ ಚೆಕ್ ಮೂಲಕ ವೇತನ ನೀಡಬೇಕು. ಕೆಲಸ ಮಾಡುವ ಸಂದರ್ಭದಲ್ಲಿ ಮರಣ ಹೊಂದಿದರೆ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಕೊಡಬೇಕು. ಕಾನೂನಿನ ಪ್ರಕಾರ ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಹಾಗೂ ಮತ್ತಿತರ ವಿವಿಧ ಬೇಡಿಕೆಗಳನ್ನು ಕಲ್ಪಿಸಬೇಕು~ ಎಂದು ಅವರು ಒತ್ತಾಯಿಸಿದರು.

`ಬಿಬಿಎಂಪಿಯಲ್ಲಿ 4 ಸಾವಿರ ಕಾಯಂ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸಿದ್ದು, ಈ ನೇಮಕಾತಿಗೆ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂ ಪೌರಕಾರ್ಮಿಕರನ್ನಾಗಿ ನೇಮಕ ಮಾಡಿಕೊಳ್ಳಬೇಕು~ ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ.ವೆಂಕಟೇಶ್, ಮಹಾಪ್ರಧಾನ ಕಾರ್ಯದರ್ಶಿ ಎ.ಜೈರಿಮ್ ಮತ್ತಿರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.