ADVERTISEMENT

‘ಉತ್ತಮ ಜಗತ್ತಿಗಾಗಿ ಭಾರತ ಇಸ್ರೇಲ್ ಒಪ್ಪಂದ ಪೂರಕ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 20:05 IST
Last Updated 16 ಮಾರ್ಚ್ 2018, 20:05 IST

ಬೆಂಗಳೂರು: ಆಹಾರದಿಂದ ಹಿಡಿದು ಸೈಬರ್ ಭದ್ರತೆವರೆಗೂ ಭಾರತ ಹಾಗೂ ಇಸ್ರೇಲ್ ಒಪ್ಪಂದ ಮಾಡಿಕೊಂಡಿವೆ. ಉತ್ತಮ ಜಗತ್ತು ನಿರ್ಮಾಣಕ್ಕೆ ಈ ಒಪ್ಪಂದಗಳು ಪೂರಕವಾಗಿವೆ ಎಂದು ಇಸ್ರೇಲ್ ಕಾನ್ಸುಲ್ ಜನರಲ್ ಡಾನಾ ಕುರ್ಶ್‌ ಹೇಳಿದರು.

ಕ್ರೈಸ್ಟ್‌ ಕಾಲೇಜು ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಟ್ಟದ ವಿಚಾರಸಂಕಿರಣದಲ್ಲಿ ಮಾತನಾಡಿದರು.

ಭಾರತ ಹಾಗೂ ಇಸ್ರೇಲ್ ನವೋದ್ಯಮ ದೇಶಗಳಾಗಿವೆ. ಈ ಎರಡು ದೇಶಗಳಲ್ಲಿ ಯುವ ಸಮೂಹದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸೈಬರ್ ಅಪರಾಧ ತಡೆಗೂ ಒತ್ತು ನೀಡಲಾಗಿದೆ ಎಂದು ಹೇಳಿದರು.

ADVERTISEMENT

ಇಸ್ರೇಲ್‌ನ ಸೈಬರ್ ಭದ್ರತಾ ತಜ್ಞರನ್ನು ನಗರಕ್ಕೆ ಕರೆಸಿ, ವಿಷಯ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಉದ್ಯಮ ಅವಕಾಶಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಅಂತೆಯೇ ಇಲ್ಲಿನ ತಜ್ಞರನ್ನು ಇಸ್ರೇಲ್‌ಗೆ ಕರೆದೊಯ್ದು ವಿಷಯ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇಸ್ರೇಲ್‌ನ ಸೈಬರ್ ತಜ್ಞೆ ಡೆಬೊರಾ ಹೊಸೆನ್ ಕೌರಿಯಲ್, ‘ಆಡಳಿತದಲ್ಲಿ ಸೈಬರ್ ಭದ್ರತೆ, ಸಂಶೋಧನೆ ಹಾಗೂ ನೀತಿಗಳನ್ನು ಭಾರತ ಉತ್ತಮವಾಗಿ ನಿರ್ವಹಿಸುತ್ತಿದೆ. ಈ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ಗುರುತಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.


ಉದ್ಯಮ ಕ್ಷೇತ್ರಕ್ಕೂ ಭಾರತ ಅತ್ಯಂತ ಪ್ರಾಶಸ್ತ್ಯ ಸ್ಥಳವಾಗಿದೆ. ಅದಕ್ಕೆ ಪೂರಕವಾದ ವಾತಾವರಣವಿದೆ. ಇಸ್ರೇಲ್ ಹಾಗೂ ಭಾರತ ಸಹಭಾಗಿತ್ವದಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದರು.

ಸೈಬರ್ ತಜ್ಞೆ ಲತಾ ರೆಡ್ಡಿ, ‘ಸಮಾನ ಮನಸ್ಕ ದೇಶಗಳು ಸೈಬರ್ ಭದ್ರತೆ ವಿಚಾರದಲ್ಲಿ ಒಗ್ಗೂಡಬೇಕಿದೆ. ಸೈಬರ್ ತಂತ್ರಜ್ಞಾನ ಹೊಸ ಹೊಸ ಆಯಾಮಗಳ ಬಗ್ಗೆ ಪರಸ್ಪರ ಚರ್ಚಿಸಬೇಕಿದೆ. ಆಗ ಮಾತ್ರ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಬಹುದು’ ಎಂದು ಅಭಿಪ್ರಾಯಪಟ್ಟರು.

ಸದ್ಯ ಸೈಬರ್ ಅಪರಾಧಗಳ ತನಿಖೆಗೆ ಕೆಲ ದೇಶಗಳಿಂದ ಸಹಕಾರ ಸಿಗುತ್ತಿಲ್ಲ. ಅದಕ್ಕೆ ಕಾನೂನಾತ್ಮಕ ತೊಡುಕುಗಳಿವೆ. ಇದರಿಂದ ಅಪರಾಧಗಳ ತನಿಖೆಗೆ ಹಿನ್ನಡೆಯಾಗುತ್ತಿದೆ. ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.