ADVERTISEMENT

ಉತ್ತಮ ಬೆಂಗಳೂರಿಗೆ ನೂರೆಂಟು ಆಲೋಚನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 19:39 IST
Last Updated 13 ಅಕ್ಟೋಬರ್ 2017, 19:39 IST
ಕಾರ್ಯಕ್ರಮದಲ್ಲಿ ಕೆ.ಬಿ.ಅಖಿಲೇಶ್‌ (ಎಡದಿಂದ ಎರಡನೆಯವರು) ಹಾಗೂ ಭವತಾರಿಣಿ ಆಶ್ರಮದ ಮಾತಾ ವಿವೇಕಮಯಿ ಮಾತುಕತೆ ನಡೆಸಿದರು. ಪ್ರೇಮ್‌ ಜೈನ್‌, ಪ್ರಶಾಂತ್‌ ಮೆಹ್ರಾ ಇದ್ದಾರೆ. –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಕೆ.ಬಿ.ಅಖಿಲೇಶ್‌ (ಎಡದಿಂದ ಎರಡನೆಯವರು) ಹಾಗೂ ಭವತಾರಿಣಿ ಆಶ್ರಮದ ಮಾತಾ ವಿವೇಕಮಯಿ ಮಾತುಕತೆ ನಡೆಸಿದರು. ಪ್ರೇಮ್‌ ಜೈನ್‌, ಪ್ರಶಾಂತ್‌ ಮೆಹ್ರಾ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸ್ಟೂಡೆಂಟ್‌ ಫಾರ್‌ ಡೆವಲಪ್‌ಮೆಂಟ್‌ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸ್ಟೂಡೆಂಟ್‌ ಕೌನ್ಸಿಲ್‌ ಆಶ್ರಯದಲ್ಲಿ ‘ಉತ್ತಮ ಬೆಂಗಳೂರಿಗಾಗಿ ಸಮಾವೇಶ’ವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

‘ಇದು ಮೂರನೇ ಸಮಾವೇಶವಾಗಿದೆ. ಸರ್ಕಾರೇತರ ಸಂಸ್ಥೆಗಳು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಹಾಗೂ ಬಸ್‌ ಚಾಲಕರು ಸೇರಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಉತ್ತಮ ಬೆಂಗಳೂರಿಗಾಗಿ ಕಂಡಿರುವ ಕನಸುಗಳೇನು, ಅವರ ಆಲೋಚನಾ ಕ್ರಮ ಏನಿರಬಹುದು ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಂಡು ಬರುತ್ತಿದ್ದೇವೆ’ ಎಂದು ಸ್ಟೂಡೆಂಟ್‌ ಫಾರ್‌ ಡೆವಲಪ್‌ಮೆಂಟ್‌ನ ರಾಷ್ಟ್ರೀಯ ಸಹ ಸಂಚಾಲಕ ಪ್ರೇಮ್‌ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರನ್ನು ಉತ್ತಮಪಡಿಸಲು 362 ಜನರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ 62 ಮಂದಿ ತಮ್ಮ ಆಲೋಚನೆಗಳಿಗೆ ಸಂಬಂಧಿಸಿದಂತೆ ಪ್ರದರ್ಶನ ಏರ್ಪಡಿಸಿದ್ದಾರೆ. ಅಂತಿಮವಾಗಿ ಮೂವರ ಆಲೋಚನೆಗಳನ್ನು ಆಯ್ಕೆ ಮಾಡುತ್ತೇವೆ. ಅವುಗಳನ್ನು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಜಾರಿಗೊಳಿಸುತ್ತೇವೆ’ ಎಂದು ಅವರು ಹೇಳಿದರು.

ADVERTISEMENT

‘ಎಂಜಿನಿಯರಿಂಗ್‌ ಓದುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ವಾರ್ಡ್‌ಗಳ ಸದಸ್ಯರು, ಎಂಜಿನಿಯರ್‌ಗಳ ಬಗ್ಗೆ ಮಾಹಿತಿ ಇಲ್ಲ. ಇಂತಹ ಉದಾಸೀನ ಮನೋಭಾವ ಇರಬಾರದು. ನಗರದ ಸುಸ್ಥಿರ ಅಭಿವೃದ್ಧಿಗಾಗಿ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

‘ಐ ಗಾಟ್‌ ಗಾರ್ಬೇಜ್‌’ ಸಂಸ್ಥೆಯ ಸಂಸ್ಥಾಪಕ ಪ್ರಶಾಂತ್‌ ಮೆಹ್ರಾ, ‘ವಿದ್ಯಾರ್ಥಿಗಳು ಕೊಳೆಗೇರಿ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು’ ಎಂದರು.

ಐಐಎಸ್‌ಟಿಯ ನಿರ್ವಹಣಾ ವಿಭಾಗದ ಪ್ರಾಧ್ಯಾಪಕ ಕೆ.ಬಿ.ಅಖಿಲೇಶ್‌, ‘ನಗರದ ಸಮಗ್ರ ಬೆಳವಣಿಗೆಗಾಗಿ ಸಮುದಾಯದ ಸಂಪನ್ಮೂಲವನ್ನು ಬಳಸಿಕೊಳ್ಳಬೇಕು. ಯುವಜನಾಂಗದಲ್ಲಿರುವ ಆಲೋಚನಾ ಕ್ರಮಗಳನ್ನು ಬಳಸಿಕೊಳ್ಳಬೇಕು’ ಎಂದು ಹೇಳಿದರು.

‘ಬೆಂಗಳೂರು ಇಂದು ಮತ್ತು ನಾಳೆ’ ಕುರಿತ ಗೋಷ್ಠಿಯಲ್ಲಿ ಶಾಸಕ ಡಾ. ಸಿ.ಎನ್‌.ಅಶ್ವತ್ಥನಾರಾಯಣ, ನವಭಾರತ್‌ ಡೆಮಾಕ್ರಟಿಕ್‌ ಪಾರ್ಟಿಯ ಅನಿಲ್‌ ಸೆಟ್ಟಿ, ‘ಪ್ರಜಾವಾಣಿ’ ಪತ್ರಿಕೆಯ ವಿಶೇಷ ಪ್ರತಿನಿಧಿ ಜಿ.ಡಿ.ಯತೀಶ್‌ ಕುಮಾರ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.