ಬೆಂಗಳೂರು: ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಕೈಗೊಂಡಿದ್ದ ಅಗ್ನಿ ಅನಾಹುತ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನದ ವೇಳೆ ಹಗ್ಗ ತುಂಡಾಗಿ ಸಿದ್ಧ ಉಡುಪು ಕಾರ್ಖಾನೆಯ ಉದ್ಯೋಗಿಯೊಬ್ಬರು ಕಟ್ಟಡದ ಮೂರನೇ ಅಂತಸ್ತಿನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಶವಂತಪುರ ಸಮೀಪದ ಗೊರಗುಂಟೆಪಾಳ್ಯದಲ್ಲಿ ಶುಕ್ರವಾರ ನಡೆದಿದೆ.
ಬಾಂಬೆ ರೆಯಾನ್ ಫ್ಯಾಷನ್ಸ್ ಲಿಮಿಟೆಡ್ ಸಿದ್ಧ ಉಡುಪು ಕಾರ್ಖಾನೆಯ ಕಾರ್ಮಿಕರ ಕ್ಷೇಮಾಭಿವೃದ್ಧಿ ವಿಭಾಗದಲ್ಲಿ ಉದ್ಯೋಗಿಯಾಗಿದ್ದ ನಳಿನಿ (25) ಮೃತಪಟ್ಟವರು. ಮೂಲತಃ ಗೌರಿಬಿದನೂರಿನ ಚಿಟ್ಟವಲಹಳ್ಳಿ ಗ್ರಾಮದ ಅವರು ಸಹೋದರ ಹರೀಶ್ ಜತೆ ನಗರದ ಕೊಡಿಗೇಹಳ್ಳಿಯ ಸಂಜೀವಿನಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೃಷಿಕರಾದ ರಾಮಕೃಷ್ಣರೆಡ್ಡಿ ಹಾಗೂ ಲಕ್ಷ್ಮಿದೇವಮ್ಮ ದಂಪತಿಯ ಮಗಳಾದ ನಳಿನಿ, ಬೆಂಗಳೂರಿನ ಶಂಕರಮಠ ಸಮೀಪದ ಅನುಪಮಾ ಕಾಲೇಜಿನಲ್ಲಿ ಎಂಎಸ್ಡಬ್ಲ್ಯೂ ಓದಿದ್ದರು. ಅವರು ಒಂದೂವರೆ ವರ್ಷದ ಹಿಂದೆ ಬಾಂಬೆ ರೆಯಾನ್ ಫ್ಯಾಷನ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಕಾರ್ಮಿಕ ಕಲ್ಯಾಣಾಧಿಕಾರಿಯಾಗಿ ಸೇರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.