ಬೆಂಗಳೂರು: ಸಾಫ್ಟ್ವೇರ್ ಕಂಪೆನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಸಾರ್ವಜನಿಕರಿಗೆ ನಂಬಿಸಿ, ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಮೂವರು ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರಣ್ಯಪುರ ಸಮೀಪದ ನಂಜಪ್ಪಲೇಔಟ್ನ ಗಾಯಿತ್ರಿ ರೆಡ್ಡಿ (35), ಆಕೆಯ ಪತಿ ಲಕ್ಷ್ಮೀಕಾಂತ್ (40) ಹಾಗೂ ಕೃಷ್ಣ (36) ಬಂಧಿತರು. ಆರೋಪಿಗಳು ‘ಡ್ರೀಮ್ ಅಟ್ ಜಾಬ್’ ಎಂಬ ಹೆಸರಿನ ಸಂಸ್ಥೆಯ ಮೂಲಕ ನಗರದ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೆಲಸ ಕೊಡಿಸುವುದಾಗಿ 15 ಮಂದಿಯಿಂದ ತಲಾ ರಊ 90,000 ಹಣ ಪಡೆದು ವಂಚಿಸಿದ್ದರು. ಈ ಸಂಬಂಧ ವಂಚನೆಗೊಳಗಾದ ಮಧುಸೂದನ್ ದೂರು ಕೊಟ್ಟಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
‘ನಂಜಪ್ಪ ಲೇಔಟ್ನ ಡ್ರೀಮ್ ಅಟ್ ಜಾಬ್ ಸಂಸ್ಥೆಗೆ ಸ್ನೇಹಿತನೊಂದಿಗೆ ಹೋದಾಗ ಅಲ್ಲಿ ಗಾಯಿತ್ರಿ ರೆಡ್ಡಿ ಅವರ ಪರಿಚಯವಾಯಿತು. ತಮ್ಮನ್ನು ಸಂಸ್ಥೆಯ ವ್ಯವಸ್ಥಾಪಕಿ ಎಂದು ಪರಿಚಯಿಸಿಕೊಂಡ ಅವರು, ತನಗೆ ‘ಬ್ರಾಡ್ಕಾಂ’ ಸಾಫ್ಟ್ವೇರ್ ಕಂಪೆನಿಯಲ್ಲಿ ಹಿರಿಯ ಅಧಿಕಾರಿಗಳು ಗೊತ್ತಿದ್ದಾರೆ. ಅವರಿಗೆ ಹೇಳಿ ಹೆಚ್ಚು ವೇತನ ಸಿಗುವ ಕೆಲಸ ಕೊಡಿಸುತ್ತೇನೆ. ಇದಕ್ಕೆ ರೂ 90,000 ಹಣ ಕೊಡಬೇಕು ಎಂದರು. ಅದಕ್ಕೆ ಒಪ್ಪಿಕೊಂಡ ನಾನು, ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ಎನ್ನಲಾದ ಕೃಷ್ಣ ಎಂಬಾತನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದೆ’ ಎಂದು ಮಧುಸೂದನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಹಣ ಪಾವತಿಸಿದ ಕೆಲ ದಿನಗಳ ನಂತರ ಬ್ರಾಡ್ಕಾಂ ಕಂಪೆನಿಯಲ್ಲಿ ಕೆಲಸ ಸಿಕ್ಕಿರುವುದಾಗಿ ಮನೆಗೆ ಪತ್ರ ರವಾನಿಸಿದರು. ಪತ್ರದಲ್ಲಿ 2013ರ ಜು.10ರಂದು ಕೆಲಸಕ್ಕೆ ಹಾಜರಾಗುವಂತೆ ತಿಳಿಸಲಾಗಿತ್ತು. ಆ ದಿನ ಬ್ರಾಡ್ಕಾಂ ಕಂಪೆನಿಗೆ ಹೋಗಿ ವಿಚಾರಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಯಿತು. ಬಳಿಕ ಗಾಯಿತ್ರಿ ಅವರನ್ನು ಸಂಪರ್ಕಿಸಿದಾಗ ಸೆ. 10ರಂದು ನಮ್ಮ ಕಂಪೆನಿಯಲ್ಲೇ ಕೆಲಸ ಕೊಡಿಸುವುದಾಗಿ ನಂಬಿಸಿದರು. ಆ ದಿನ ಮುಗಿದರೂ ಕೆಲಸ ಸಿಗದ ಕಾರಣ ಈ ಬಗ್ಗೆ ವಿದ್ಯಾರಣ್ಯಪುರ ಠಾಣೆಗೆ ಮೌಖಿಕ ದೂರು ನೀಡಿದ್ದೆ’ ಎಂದು ವಿವರಿಸಿದರು.
ನಂತರ ಪೊಲೀಸರು ಗಾಯಿತ್ರಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಆಗ ತಿಂಗಳೊಳಗೆ ಹಣ ಹಿಂದಿರುಗಿಸುವುದಾಗಿ ಕಾಲಾವಕಾಶ ಕೇಳಿದ್ದರು. ಹೀಗಾಗಿ ಮತ್ತೊಮ್ಮೆ ಅವರ ಕೋರಿಕೆಯಂತೆಯೇ ನಡೆದೆ. ಆದರೆ, ಅವರು ಮೇಲಿಂದ ಮೇಲೆ ಗಡುವನ್ನು ಮುಂದೂಡತ್ತಲೇ ಹೋದ ಕಾರಣ ವಂಚನೆ ಪ್ರಕರಣ ದಾಖಲಿಸಿದೆ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.