ಬೆಂಗಳೂರು: ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಕೈಕಾಲು ಕಟ್ಟಿ ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯಡಿಯೂರು ಕರೆಯ ಬಳಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ.
ಜಯನಗರದ ಎರಡನೇ ಮುಖ್ಯರಸ್ತೆಯ 24ನೇ ಅಡ್ಡರಸ್ತೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಎಂ.ಜಿ.ರಸ್ತೆಯಲ್ಲಿರುವ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ನ ಪ್ರಧಾನ ಕಚೇರಿಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಶಂಕರ ಪೂಜಾರಿ (56) ಕೊಲೆಯಾದವರು.
ಇವರು ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಪಡುಕೋಣೆಯವರು ಎಂದು ತಿಳಿದು ಬಂದಿದೆ. ಒಂದೂವರೆ ವರ್ಷದ ಹಿಂದೆ ಬೆಂಗಳೂರಿನ ಜಯನಗರದ ಇದೇ ಬ್ಯಾಂಕ್ನ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಎಂ.ಜಿ.ರಸ್ತೆಯ ಮುಖ್ಯ ಕಚೇರಿಗೆ ವರ್ಗಾವಣೆ ಆಗಿದ್ದರು. ಮನೆಯಲ್ಲಿ ಒಬ್ಬರೇ ಇರುತ್ತಿದ್ದ ಪೂಜಾರಿ ಅವರ ಪತ್ನಿ ಕುಸುನಯನ ಮುಂಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಮಗಳೊಂದಿಗೆ ಅಲ್ಲಿಯೇ ವಾಸವಾಗಿದ್ದಾರೆ.
ಪ್ರತಿದಿನ ಊಟ ತರಲು ಹುಡುಗನೊಬ್ಬನನ್ನು ಗೊತ್ತು ಮಾಡಿದ್ದರು. ಅಂತೆಯೇ ಭಾನುವಾರ ಸಂಜೆ 4.30ಕ್ಕೆ ಹುಡುಗ ಊಟದೊಂದಿಗೆ ತೆರಳಿದಾಗ ಬಾಗಿಲು ಅರ್ಧ ಮುಚ್ಚಿತ್ತು. ನಂತರ ಒಳಗೆ ಹೋಗಿ ನೋಡಿದಾಗ ಮೃತದೇಹ ಹಾಸಿಗೆ ಮೇಲೆ ಇರುವುದನ್ನು ನೋಡಿ ಗಾಬರಿಗೊಂಡು ಇತರರಿಗೆ ಈ ವಿಷಯ ತಿಳಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
`ಒಂದಕ್ಕಿಂತ ಹೆಚ್ಚು ದುಷ್ಕರ್ಮಿಗಳು ಈ ಕೊಲೆ ಮಾಡಿರಬಹುದು~ ಎಂದು ಪಶ್ಚಿಮ ವಲಯದ ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ ಅವರು ಶಂಕಿಸಿದ್ದಾರೆ.
ಈ ಕುರಿತು ಮಾತನಾಡಿ, ಶಂಕರ್ ಮೊದಲನೇ ಮಹಡಿಯಲ್ಲಿ ವಾಸವಾಗಿದ್ದರು. ಕೊಲೆಯಾದ ನಂತರವಷ್ಟೇ ಕೆಳಭಾಗದ ಮನೆಯವರಿಗೆ ತಿಳಿದಿದೆ~ ಎಂದರು.
ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್, `ದಂಪತಿಯ ಮಧ್ಯೆ ವಿರಸ ಉಂಟಾಗಿತ್ತೇ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.