ಬೆಂಗಳೂರು: ರಾಜರಾಜೇಶ್ವರಿನಗರದ ಶುಭೋದಯ ಅಪಾರ್ಟ್ಮೆಂಟ್ನಲ್ಲಿ ದುಷ್ಕರ್ಮಿಗಳು ಎಪ್ಪತ್ತು ವರ್ಷದ ವೃದ್ಧೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಅಪಾರ್ಟ್ಮೆಂಟ್ನಲ್ಲಿ ಒಂದು ವರ್ಷದಿಂದ ವಾಸವಿದ್ದ ರಮಾ ದೊರೈಮಣಿ ಕೊಲೆಯಾದವರು. ಮೂಲತಃ ಚೆನ್ನೈನ ಅವರಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳು ವಿದೇಶದಲ್ಲಿ ಹಾಗೂ ಮಗಳು ಚೆನ್ನೈನಲ್ಲಿ ವಾಸವಿದ್ದಾರೆ. ಅವರ ಪತಿ 30 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಸಂಬಂಧಿ ಆದಿತ್ಯ ಎಂಬುವರು ಶನಿವಾರ ಅವರ ಫ್ಲ್ಯಾಟ್ಗೆ ಕರೆ ಮಾಡಿದ್ದಾರೆ. ಎಷ್ಟು ಬಾರಿ ಪ್ರಯತ್ನಿಸಿದರೂ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಆದಿತ್ಯ ಸಂಜೆ 5 ಗಂಟೆ ಸುಮಾರಿಗೆ ಅಪಾರ್ಟ್ಮೆಂಟ್ಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
‘ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಶುಕ್ರವಾರ ಬೆಳಿಗ್ಗೆ ರಮಾ ಅವರ ಭೇಟಿಗೆ ಬಂದಿದ್ದ. ರಮಾ ಅವರ ಫ್ಲ್ಯಾಟ್ಗೆ ಕರೆ ಮಾಡಿ ಈ ವಿಷಯ ತಿಳಿಸಿದೆ.
ಅವರು ಆ ಇಬ್ಬರನ್ನು ಒಳಗೆ ಕಳಿಸುವಂತೆ ತಿಳಿಸಿದರು. ಸುಮಾರು 4ಗಂಟೆಗಳ ಬಳಿಕ ಅವರಿಬ್ಬರು ಹೊರಗೆ ಹೋದರು. ಆ ನಂತರ ರಮಾ ಅವರು ಫ್ಲ್ಯಾಟ್ನಿಂದ ಹೊರ ಬಂದಿರಲಿಲ್ಲ’ ಎಂದು ಅಪಾರ್ಟ್ಮೆಂಟ್ನ ಕಾವಲುಗಾರ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಮಾ ಅವರ ಭೇಟಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಅವರ ಮೈಮೇಲಿದ್ದ ಚಿನ್ನದ ಸರ, ಕಿವಿಯ ಓಲೆ ಹಾಗೂ ಬಳೆಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಪರಿಚಿತರೇ ಹಣಕ್ಕಾಗಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.