ಬೆಂಗಳೂರು: ಎಟಿಎಂ ಘಟಕಗಳಿಗೆ ತುಂಬಲು ತೆಗೆದುಕೊಂಡು ಹೋಗುತ್ತಿದ್ದ ₹2 ಕೋಟಿಯನ್ನು ಚುನಾವಣಾ ಅಧಿಕಾರಿಗಳು ಹಾಗೂ ಹಲಸೂರು ಪೊಲೀಸರು ಭಾನುವಾರ ಜಪ್ತಿ ಮಾಡಿದ್ದಾರೆ.
ವೈಟ್ಫೀಲ್ಡ್ ಭಾಗದಲ್ಲಿರುವ ಎಚ್ಡಿಎಫ್ಸಿ ಹಾಗೂ ಐಸಿಐಸಿಐ ಬ್ಯಾಂಕ್ಗಳ ಎಟಿಎಂ ಘಟಕಗಳಿಗೆ ಹಣ ತುಂಬುವ ಜವಾಬ್ದಾರಿಯನ್ನು ರೈಟರ್ಸ್ ಸೇಫ್ ಗಾರ್ಡ್ಸ್ ಕಂಪನಿಗೆ ವಹಿಸಲಾಗಿದೆ. ಆ ಕಂಪನಿ ಸಿಬ್ಬಂದಿ, ತಮ್ಮ ವಾಹನದಲ್ಲಿ ಹಣ ಇಟ್ಟುಕೊಂಡು ಹಲಸೂರು ಕೆರೆ ರಸ್ತೆಯ ಮೂಲಕ ಎಟಿಎಂ ಘಟಕಗಳತ್ತ ಹೊರಟಿದ್ದರು.
ವಾಹನ ತಡೆದಿದ್ದ ಚುನಾವಣಾಧಿಕಾರಿಗಳು, ಹಣಕ್ಕೆ ದಾಖಲೆ ಕೇಳಿದ್ದರು. ಸಿಬ್ಬಂದಿ ಕೊಟ್ಟಿದ್ದ ದಾಖಲೆಗಳಲ್ಲಿ ಗೊಂದಲಗಳಿದ್ದವು. ಸ್ಥಳಕ್ಕೆ ಬಂದ ಕಂಪನಿ ವ್ಯವಸ್ಥಾಪಕ ಮಧುಸೂದನ್, ‘24 ಎಟಿಎಂ ಘಟಕಗಳಿಗೆ ತುಂಬಬೇಕಿರುವ ಹಣವಿದು’ ಎಂದು ಹೇಳಿ ಕೆಲ ದಾಖಲೆಗಳನ್ನು ತೋರಿಸಿದ್ದರು. ಅದರಿಂದ ಸಮಾಧಾನಗೊಳ್ಳದ ಅಧಿಕಾರಿಗಳು, ಹಣ ಜಪ್ತಿ ಮಾಡಿದರು. ದಾಖಲೆ ಸಲ್ಲಿಸಿದ ಬಳಿಕವೇ ಹಣ ಬಿಡುಗಡೆ ಮಾಡುವುದಾಗಿ ಅಧಿಕಾರಿಗಳು ಹೇಳಿದರು.
‘ಬ್ಯಾಂಕ್ಗಳ ಹಣ ಎಂಬುದಕ್ಕೆ ಸೂಕ್ತ ದಾಖಲೆ ನೀಡಿಲ್ಲ. ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ನ್ಯಾಯಾಲಯದಲ್ಲಿ ದಾಖಲೆ ಹಾಜರುಪಡಿಸಿ, ಹಣ ಬಿಡಿಸಿಕೊಂಡು ಹೋಗುವಂತೆ ಹೇಳಿದ್ದೇವೆ’ ಎಂದು ಅಧಿಕಾರಿಗಳು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.