ಬೆಂಗಳೂರು: `ಐಸಾನ್ ಧೂಮಕೇತು'ವು ನವೆಂಬರ್ 28ರಂದು ಭೂಕಕ್ಷೆಗೆ ಹತ್ತಿರದಲ್ಲಿ ಹಾದು ಹೋಗಲಿದ್ದು, ಯಾವುದೇ ದುಷ್ಪರಿಣಾಮ ಸಂಭವಿಸುವುದಿಲ್ಲ ಎಂದು ಭಾರತೀಯ ಖಗೋಳಶಾಸ್ತ್ರ ಸಂಸ್ಥೆಯ ವಿಜ್ಞಾನಿ ಪ್ರೊ.ಪ್ರಜ್ವಲ್ ಶಾಸ್ತ್ರಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನವೆಂಬರ್ 28ರ ನಂತರ ಸುಮಾರು ಹದಿನೈದರಿಂದ ಇಪ್ಪತ್ತು ದಿನಗಳವರೆಗೆ `ಐಸಾನ್ ಧೂಮಕೇತು' ಕಾಣಿಸಿಕೊಳ್ಳಲಿದೆ.
ಇದರ ಆಕರ್ಷಕ ದೃಶ್ಯಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲೆ ಹಾಗೂ ತಾಲ್ಲೂಕು ಕೆಂದ್ರಗಳಲ್ಲಿ ತಯಾರಿ ನಡೆಸಿದೆ ಎಂದು ಹೇಳಿದರು. ಇದಕ್ಕೆ ಪೂರ್ವಭಾವಿಯಾಗಿ `ಐಸಾನ್ ಧೂಮಕೇತು'ವಿನ ಆಕರ್ಷಕ ದೃಶ್ಯಗಳನ್ನು ಸೆರೆಹಿಡಿಯುವ ಬಗ್ಗೆ ದಕ್ಷಿಣ ರಾಜ್ಯಗಳ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಮೂರು ದಿನಗಳ ರಾಷ್ಟ್ರ ಮಟ್ಟದ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.
ಭಾರತ ಜ್ಞಾನ ವಿಜ್ಞಾನ ಸಮಿತಿ, ಸಮಕಾಲೀನ ಅಧ್ಯಯನ ಕೇಂದ್ರ ಹಾಗೂ ಭಾರತೀಯ ವಿಜ್ಞಾನ ಮಂದಿರ ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿರುವ ಕಾರ್ಯಗಾರವನ್ನು ಮಂಗಳವಾರ ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಭಾರತೀಯ ಖಗೋಳಶಾಸ್ತ್ರ ಸಂಸ್ಥೆಯ ವಿಜ್ಞಾನಿ ಡಾ.ಎಸ್.ಚಟರ್ಜಿ, ಭಾತರ ಜ್ಞಾನ ವಿಜ್ಞಾನ ಸಮಿತಿಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರಭಾ, ಖಜಾಂಚಿ ಜೈಕುಮಾರ್ ಉಪಸ್ಥಿತರಿದ್ದರು.
ರೇಡಿಯೊ ಟೆಲಿಸ್ಕೊಪ್ ನಿರ್ಮಾಣ
ಬೆಂಗಳೂರು: ಜಗತ್ತಿನಲ್ಲಿ ಮೊದಲ ನಕ್ಷತ್ರ ಶೋಧ ನಡೆದ ನೆನಪಿನಲ್ಲಿ ನಗರದ ರಾಮನ್ ಸಂಶೋಧನಾ ಸಂಸ್ಥೆಯು ಆಸ್ಟ್ರೇಲಿಯಾ, ಅಮೆರಿಕ ಹಾಗೂ ನ್ಯೂಜಿಲೆಂಡ್ನ ಸಹಯೋಗದಲ್ಲಿ `ಮರ್ಚಿಸನ್ ವೈಡ್ಫೀಲ್ಡ್ ಅರೇ (ಎಂಡಬ್ಲ್ಯೂಎ)' ರೇಡಿಯೊ ಟೆಲಿಸ್ಕೊಪ್ ನಿರ್ಮಿಸಿದೆ.
ಸಂಸ್ಥೆಯಲ್ಲಿ ಇದರ ಡಿಜಿಟಲ್ ರಿಸಿವರ್ ನಿರ್ಮಿಸಲಾಗಿದೆ. ಈ ಸಾಧನವನ್ನು ಅಳವಡಿಸಲು ಜಾಗತಿಕ ಪಾಲುದಾರರೊಂದಿಗೆ ಸಂಸ್ಥೆಯ ಎಂಜಿನಿಯರ್ಗಳು ಹಾಗೂ ವಿಜ್ಞಾನಿಗಳು ದುಡಿದಿದ್ದಾರೆ. ರಾಮನ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಸ್ಥೆಯ ನಿರ್ದೇಶಕ ಡಾ. ರವಿ ಸುಬ್ರಹ್ಮಣನ್ ಮಾತನಾಡಿ, `ಜಾಗತಿಕ ಸಹಯೋಗದ ಈ ಕಾರ್ಯದಲ್ಲಿ ಯಶಸ್ಸು ಸಾಧಿಸಿರುವುದು ಹೆಮ್ಮೆ ಎನಿಸುತ್ತಿದೆ. ಇನ್ನೂ ನಿಗೂಢ ಎನಿಸಿರುವ ಖಗೋಳ ಜಗತ್ತನ್ನು ಮನುಷ್ಯ ಅರಿತುಕೊಳ್ಳಲು ಈ ಸಾಧನ ಅನುಕೂಲವಾಗಲಿದೆ. ಇದೊಂದು ತಾಂತ್ರಿಕ ಕ್ರಾಂತಿ' ಎಂದರು.
ಭಾರತದಲ್ಲಿರುವ ಆಸ್ಟ್ರೇಲಿಯಾದ ರಾಯಬಾರಿ ಪ್ಯಾಟ್ರಿಕ್ ಸುಕ್ಲಿಂಗ್, `ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ಆಸ್ಟ್ರೇಲಿಯಾ ಶ್ರೀಮಂತ ಪರಂಪರೆ ಹೊಂದಿದೆ. ವಿಜ್ಞಾನದ ಸವಾಲುಗಳನ್ನು ಎದುರಿಸಲು ಆಸ್ಟ್ರೇಲಿಯಾ ಹಾಗೂ ಭಾರತ ಜೊತೆಗೂಡಿ ದುಡಿಯುತ್ತಿದ್ದಾರೆ.
ಇದಕ್ಕೆ ಎಂಡಬ್ಲ್ಯೂಎ ಉತ್ತಮ ಉದಾಹರಣೆ' ಎಂದು ಹೇಳಿದರು. ಎಂಡಬ್ಲ್ಯೂಎ ಅಂತರರಾಷ್ಟ್ರೀಯ ಪಾಲುದಾರಿಕೆ ಕಾರ್ಯಕ್ರಮದ ಆಡಳಿತ ಮಂಡಳಿ ಸದಸ್ಯರೂ ಪ್ರೊ. ಬ್ರಿಯಾನ್ ಶಿಮಿತ್ ಮಂಗಳವಾರ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಾಗೂ ಬುಧವಾರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.