ADVERTISEMENT

ಒಂದು ಕೆ.ಜಿ. ಚಿನ್ನದ ಆಭರಣ ದರೋಡೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಬೆಂಗಳೂರು: ದುಷ್ಕರ್ಮಿಯೊಬ್ಬ ಯುವಕನ ಕೈಯಲ್ಲಿದ್ದ ಒಂದು ಕೆ.ಜಿ. ಚಿನ್ನದ ಆಭರಣ ಇದ್ದ ಕೈಚೀಲವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಅವಿನ್ಯೂ ರಸ್ತೆಯಲ್ಲಿ ಶನಿವಾರ ಹಾಡಹಗಲೇ ನಡೆದಿದೆ.

 ಜಗದೀಶ್ ಆಭರಣ ಕಳೆದುಕೊಂಡವರು. ಚಿನ್ನಾಭರಣ ತಯಾರಕಾ ಚಿಕ್ಕಪೇಟೆ ನಿವಾಸಿ ಅಮಿತ್ ಜೈನ್ ಅವರ ಬಳಿ ಜಗದೀಶ್ ಕೆಲಸ ಮಾಡುತ್ತಾರೆ. ಅಮಿತ್ ಅವರು ವಿವಿಧ ಮಾದರಿಯ ಆಭರಣ ತಯಾರಿಸಿ ಅದನ್ನು ಅಂಗಡಿಗಳಿಗೆ ಮಾರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಅಮಿತ್ ಮತ್ತು ಜಗದೀಶ್ ಇಬ್ಬರೂ ವ್ಯಾಪಾರಕ್ಕೆ ಅವಿನ್ಯೂ ರಸ್ತೆಗೆ ಬಂದಿದ್ದರು. ಅಮಿತ್ ಅವರು ಎರಡು ಕೆ.ಜಿ. ಆಭರಣವನ್ನು  ಕೈಚೀಲದಲ್ಲಿ ಇಟ್ಟುಕೊಂಡಿದ್ದರು.

ಜಗದೀಶ್ ಕೈಯಲ್ಲಿದ್ದ ಚೀಲದಲ್ಲಿ ಒಂದು ಕೆ.ಜಿ. ಆಭರಣವಿತ್ತು. ಅವಿನ್ಯೂ ರಸ್ತೆಯಲ್ಲಿರುವ ಸಿಹಿ ತಿಂಡಿ ಅಂಗಡಿ ಬಳಿ ಬಂದ ದುಷ್ಕರ್ಮಿಯೊಬ್ಬ ಜಗದೀಶ್ ಕೈಯಲ್ಲಿದ್ದ ಚೀಲ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನ ದಟ್ಟಣೆ ಇದ್ದ ಕಾರಣ ದುಷ್ಕರ್ಮಿ ಸುಲಭವಾಗಿ ತಪ್ಪಿಸಿಕೊಂಡು ಹೋಗಿದ್ದಾನೆ. ಘಟನೆಯಿಂದ ಆತಂಕಗೊಂಡ ಅಮಿತ್ ಅವರು ಮನೆಗೆ ಹೋಗಿ ಆಭರಣ ಇದ್ದ ಕೈಚೀಲವನ್ನಿಟ್ಟು ಬಂದು ಆ ನಂತರ ದೂರು ನೀಡಿದ್ದಾರೆ.

ADVERTISEMENT

`ಕೈ ಚೀಲ ಕಿತ್ತುಕೊಂಡ ತಕ್ಷಣ ಆತ ಪರಾರಿಯಾಗಿಬಿಟ್ಟ ಆತ ಯಾವ ಬಣ್ಣದ ಶರ್ಟ್ ಧರಿಸಿದ್ದ ಎಂಬುದೂ ಗೊತ್ತಾಗಿಲ್ಲ~ ಎಂದು ಜಗದೀಶ್ ಹೇಳಿಕೆ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಡಾ. ಜಿ. ರಮೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಲಸೂರುಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.