ಬೆಂಗಳೂರು: ರಾಜಧಾನಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಕುರುಬರಹಳ್ಳಿಯ ಎಸ್.ವಿ.ಕೆ ಬಡಾವಣೆಯ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಅರ್ಚಕ ವಾಸುದೇವ ಭಟ್ ಶವ ಶನಿವಾರ ಪತ್ತೆಯಾಗಿದೆ.
ರಾಜಕಾಲುವೆಯಲ್ಲಿ ಕೊಚ್ಚಿಹೋದ ನಿಂಗಮ್ಮ ಹಾಗೂ ಪುಷ್ಪಾ ಅವರಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ಡಿಆರ್ಎಫ್) ಶೋಧ ಕಾರ್ಯ ನಡೆಸಿದೆ.
ಮನೆಯ ಗೋಡೆ ಕುಸಿದು ಮೃತಪಟ್ಟಿದ್ದ ಶಂಕರಪ್ಪ ಮತ್ತು ಕಮಲಮ್ಮ ಅವರ ಶವಗಳನ್ನು ಹುಟ್ಟೂರು ಮುಳಬಾಗಿಲಿಗೆ ಕಳುಹಿಸಲಾಗಿದೆ.
‘ನಿಂಗಮ್ಮ ಹಾಗೂ ಪುಷ್ಪಾ ಅವರಿಗಾಗಿ ಎನ್ಡಿಆರ್ಎಫ್ನ ಎರಡು ತಂಡಗಳು ಬೆಳಿಗ್ಗೆಯಿಂದ ಸಂಜೆ 7ರವರೆಗೂ ಶೋಧ ಕಾರ್ಯ ನಡೆಸಿದವು. ಆದರೆ, ಈವರೆಗೂ ಪತ್ತೆಯಾಗಿಲ್ಲ. ಶೋಧ ಕಾರ್ಯಕ್ಕೆ ಹೆಲಿಕಾಪ್ಟರ್ ಬಳಸುವ ಕುರಿತು ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರ ಜತೆ ಮಾತುಕತೆ ನಡೆಸಿದೆವು. ಪ್ರತಿಕೂಲ ಹವಾಮಾನ ಇರುವುದರಿಂದ ಹೆಲಿಕಾಪ್ಟರ್ ಬಳಕೆ ಮಾಡಲಿಲ್ಲ’ ಎಂದು ಮೇಯರ್ ಆರ್.ಸಂಪತ್ ರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಳಚಿ ಬಿದ್ದ ಮೆಟ್ರೊ ನಿಲ್ದಾಣದ ಮೇಲ್ಚಾವಣಿಯ ಶೀಟ್
ಕೆ.ಆರ್.ಮಾರುಕಟ್ಟೆ ಸುರಂಗ ಮಾರ್ಗದ ಮೆಟ್ರೊ ನಿಲ್ದಾಣದ ಮೇಲ್ಚಾವಣಿಯ ಎಂಟು ಶೀಟ್ಗಳು ರಾತ್ರಿ 10.30ರ ಸುಮಾರಿಗೆ ಕಳಚಿ ಬಿದ್ದಿವೆ.
ಪ್ರಯಾಣಿಕರ ಓಡಾಟ ಕಡಿಮೆ ಇದ್ದ ವೇಳೆ ಈ ಅವಘಡ ಸಂಭವಿಸಿದ್ದರಿಂದ ಯಾವುದೇ ಅಪಾಯವಾಗಿಲ್ಲ. ಫ್ಲಾಟ್ಫಾರಂಗೆ ಹೋಗುವ ಮಾರ್ಗದ ಮೆಟ್ಟಿಲುಗಳು ಹಾಗೂ ಎಸ್ಕಲೇಟರ್ ಮೇಲೆ ಶೀಟ್ಗಳು ಬಿದ್ದಿವೆ. ಮುನ್ನೆಚ್ಚರಿಕಾ ಕ್ರಮವಾಗಿ ನಿಲ್ದಾಣ ಪ್ರವೇಶವನ್ನು ಸಿಬ್ಬಂದಿ ಬಂದ್ ಮಾಡಿದ್ದಾರೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.