ADVERTISEMENT

ಕಣ್ಮನ ಸೆಳೆದ ದೀಪ-ದರ್ಶನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:50 IST
Last Updated 23 ಅಕ್ಟೋಬರ್ 2011, 19:50 IST

ಬೆಂಗಳೂರು: ಮನಮೋಹಕ ಸಮೂಹ ನೃತ್ಯ ಪ್ರದರ್ಶನ. ಸುಶ್ರಾವ್ಯ ಗೀತ- ಗಾಯನ. ಸುಮಧುರ ಸಿತಾರ್ ವಾದನ. ಮಕ್ಕಳಿಂದ ಆಕರ್ಷಕ ನೃತ್ಯ. ಭಾವಪೂರ್ಣ ನೃತ್ಯ ರೂಪಕ...

ಬೆಂಗಳೂರು ದೂರದರ್ಶನ ಕೇಂದ್ರವು ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಾಜಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ದೀಪ- ದರ್ಶನ~ ಕಾರ್ಯಕ್ರಮ ಪ್ರೇಕ್ಷಕರ ಕಣ್ಮನ ಸೆಳೆಯಿತು.

ಯುವ ಕಲಾವಿದರ ನೃತ್ಯ ಪ್ರದರ್ಶನ, ಕೃಷ್ಣನ ಬಾಲಲೀಲೆ ಕುರಿತ ರೂಪಕ, ಸಮೂಹ ಗೀತ ಗಾಯನ, ಸಿತಾರ್ ವಾದನ... ಹೀಗೆ ಸಂಗೀತ ಮತ್ತು ನೃತ್ಯ ಲೋಕವೇ ಅನಾವರಣಗೊಂಡಿತ್ತು. ಆಕರ್ಷಕ ಪ್ರದರ್ಶನಕ್ಕೆ ಸಭಿಕರು ತಲೆದೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್, `ಏಕತೆ ಮತ್ತು ಮಾನವೀಯತೆ ಬಹಳ ಮುಖ್ಯ. ಎಲ್ಲ ಜನರು ಶಾಂತಿ- ಸಹಬಾಳ್ವೆಯಿಂದ ಜೀವನ ನಡೆಸುವಂತಾಗಬೇಕು. ದೀಪಾವಳಿ ಆಚರಣೆ ವೇಳೆ ಇತರೆ ಧರ್ಮಗಳಲ್ಲೂ ಶುಭ ಆಚರಣೆಗಳು ನಡೆಯುತ್ತವೆ. ಆ ಮೂಲಕ ಎಲ್ಲ ಜನರು ಸಂಭ್ರಮದ ಆಚರಣೆಯಲ್ಲಿ ತೊಡಗುತ್ತಾರೆ~ ಎಂದರು.

`ಜಾಗತೀಕರಣದ ಈ ಸಂದರ್ಭದಲ್ಲಿ ಪರಿಸ್ಥಿತಿ ಬದಲಾಗಿದೆ ಎಂಬ ಮಾತಿದೆ. ಆದರೆ ನಮ್ಮ ಸಂಸ್ಕೃತಿ ಹಾಗೂ ಆಚರಣೆಗಳನ್ನು ಎಂದಿಗೂ ಮರೆಯಬಾರದು~ ಎಂದರು.

ಬೆಂಗಳೂರು ಕ್ರೈಸ್ತ ಧರ್ಮಾಧ್ಯಕ್ಷ ಬರ್ನಾಡ್ ಮೋರಸ್, `ದೀಪಾವಳಿ ಆಚರಣೆಯು ಎಲ್ಲರ ಮನೆ- ಮನದಲ್ಲಿ ಜ್ಞಾನದ ಜ್ಯೋತಿ ಬೆಳಗಲಿ. ಭೇದ- ಭಾವ ಮರೆತು ಪರಸ್ಪರ ಗೌರವದಿಂದ ಕಾಣುವ ಮೂಲಕ ಮಾನವ ಸಂಬಂಧಗಳು ಬಲಗೊಳ್ಳಲಿ. ಸರ್ವ ಸಮುದಾಯದ ಸರ್ವರ ಒಳಿತನ್ನು ಎತ್ತಿ ಹಿಡಿಯುವಂತಾಗಲಿ~ ಎಂದು ಆಶಿಸಿದರು.

ಮೈಸೂರಿನ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಮೇಜರ್ ಜನರಲ್ ಎ.ಕೆ. ಪ್ರಧಾನ್, ಗಡಿ ಭದ್ರತಾ ದಳದ ಐಜಿಪಿ ಸೈಯದ್ ಅಬ್ದುಲ್ ಖಾದರ್, ಕೇಂದ್ರ ಮೀಸಲು ಪೊಲೀಸ್ ದಳದ ಡಿಐಜಿ ಅರ್ಕೇಶ್, ಕಾನ್ಸುಲೇಟ್ ಆಫ್ ಜರ್ಮನಿಯ ಕಾನ್ಸುಲ್ ಜನರಲ್ ಡಾ. ಇಂಗೋ ಕಾರ್‌ಸ್ಟೆನ್, ಇಸ್ಕಾನ್‌ನ ಕೃಷ್ಣ ಕಲಾಕ್ಷೇತ್ರದ ನಿರ್ದೇಶಕ ತಿರುದಾಸ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಉದ್ಯಮಿ ದಯಾನಂದ ಪೈ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.