ADVERTISEMENT

ಕನಸಾಗಿ ಉಳಿದ ನೀರಾ ಮಂಡಳಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಚನ್ನಪಟ್ಟಣ: ಎರಡು ವರ್ಷಗಳ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನೀರಾ ಮಂಡಳಿ ರಚಿಸಿ, ತೆಂಗು ಉಪ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ನೀಡುವುದಾಗಿ ಬಜೆಟ್‌ನಲ್ಲಿ  ಪ್ರಕಟಿಸಿದ್ದರು, ಆದರೆ ಇಲ್ಲಿಯವರೆಗೂ ಮಂಡಳಿ ಅಸ್ತಿತ್ವಕ್ಕೇ ಬಂದಿಲ್ಲ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಆರೋಪಿಸಿದರು.

`ನೀರಾ ಚಳವಳಿ - ವಿಠಲೇನಹಳ್ಳಿ ಗೋಲಿಬಾರ್~ ಘಟನೆಗೆ ಹತ್ತು ವರ್ಷ ತುಂಬಿದ  ಹಿನ್ನಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ರೈತ ಸಂಘ ಹಾಗೂ ಹಸಿರು ಸೇನೆ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

`ಮಂಡಳಿಯ ರಚನೆಗಾಗಿ ಆಯವ್ಯಯದಲ್ಲಿ ಘೋಷಿಸಿದ 1ಕೋಟಿ ರೂ. ವಿಶೇಷ ಅನುದಾನ ಸಹ ಹಾಗೆಯೇ ಉಳಿದಿದೆ~ ಎಂದು ಆರೋಪಿಸಿದರು.

ಮಂಡಳಿ ರಚನೆಯಾಗಿದ್ದರೆ ನೀರಾ ಉಪ ಉತ್ಪನ್ನಗಳ ತಯಾರಿಕೆಯಲ್ಲಿ ಯಶಸ್ವಿಯಾಗಿರುವ ಶ್ರೀಲಂಕಾಕ್ಕೆ ರಾಜ್ಯ ರೈತ ಮುಖಂಡರು ಹಾಗೂ ಅಬಕಾರಿ, ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳನ್ನೊಳಗೊಂಡ 20 ಜನರ ಉನ್ನತ ಮಟ್ಟದ ಸಮಿತಿ ಅಧ್ಯಯನ ಪ್ರವಾಸ ಕೈಗೊಳ್ಳುತ್ತಿತ್ತು. ಆದರೆ ಆಗ ಉಂಟಾದ ರಾಜಕೀಯ ಪ್ರಹಸನಗಳಿಂದಾಗಿ  ಈ ಎಲ್ಲಾ ಕೆಲಸಗಳು ಸ್ಥಗಿತಗೊಂಡವು ಎಂದು ಅವರು ವಿವರಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಎಸ್. ಲಕ್ಷ್ಮಣಸ್ವಾಮಿ ಮಾತನಾಡಿ `ನೀರಾವನ್ನು ಶ್ರೀಲಂಕ ಮಾದರಿಯಲ್ಲಿ ಸಂಸ್ಕರಿಸಿ ಸಹಕಾರ ಸಂಘಗಳ (ಅಮೂಲ್ ಮಾದರಿ) ಮೂಲಕ ಉತ್ಪಾದಕರಿಂದ ಕೊಂಡು ಮಾರುಕಟ್ಟೆ ಕಲ್ಪಿಸಲು ಸಾಧ್ಯ. ಇದರಿಂದ ತೆಂಗು ಬೆಳೆಗಾರರು ಸಂಕಷ್ಟದಿಂದ ಪಾರಾಗಬ ಹುದೆಂದು ಹೈನು ಉದ್ಯಮದ ಪಿತಾಮಹ ಡಾ. ಕುರಿಯನ್ ಸಲಹೆ ನೀಡಿದ್ದರು. ಇದನ್ನು ರಾಜ್ಯ ಸರ್ಕಾರ  ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.