ADVERTISEMENT

ಕಬ್ಬು ಬೆಳೆಗಾರರ ನಿರ್ಲಕ್ಷ್ಯ: ದೇವೇಗೌಡ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 20:09 IST
Last Updated 12 ಡಿಸೆಂಬರ್ 2013, 20:09 IST

ಬೆಂಗಳೂರು:  ರಾಜ್ಯ ಸರ್ಕಾರ ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡಿಲ್ಲ. ಸಕ್ಕರೆ ಕಾರ್ಖಾನೆಗಳ ಪರವಾಗಿ ನಡೆದುಕೊಳ್ಳು ತ್ತಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇ ಗೌಡ ಟೀಕಿಸಿದರು.

ತೆಂಗು, ಅಡಿಕೆ ಬೆಳೆ ನಾಶವಾಗಿದೆ. ಭತ್ತ, ಜೋಳಕ್ಕೆ ಸೂಕ್ತ ಬೆಲೆ ಸಿಗದ ಕಾರಣ ರೈತರು ಕಂಗಾಲಾಗಿದ್ದಾರೆ. 

ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಗಮನಹರಿಸಿಲ್ಲ ಎಂದು ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ತಾವು ಅವಸರದಲ್ಲಿ ಇರುವುದಾಗಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ಹೌದು. ನಾನು ಅವಸರದಲ್ಲಿ ಇರುವುದು ನಿಜ. ಆದರೆ, ಪ್ರಧಾನಿ ಆಗುವುದಕ್ಕೆ ಅಲ್ಲ. ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಕಾರಣಕ್ಕೆ’ ಎಂದು ತಿರುಗೇಟು ನೀಡಿದರು.

‘ಮುಖ್ಯಮಂತ್ರಿಗಳ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸು ತ್ತೇನೆ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಪಣ ತೊಟ್ಟಿದ್ದೇನೆ’ ಎಂದು ಘೋಷಿಸಿದರು.

ಹಕ್ಕುಚ್ಯುತಿ ಸಮಿತಿ: ‘ನೈಸ್‌ ಸಂಸ್ಥೆ ಮುಖ್ಯಸ್ಥರೂ ಆಗಿರುವ ಶಾಸಕ ಅಶೋಕ್‌ ಖೇಣಿ ಅವರು ನನ್ನ ವಿರುದ್ಧ ಈಗಾಗಲೇ ರೂ 10 ಕೋಟಿ ಮಾನನಷ್ಟ ಮೊಕ ದ್ದಮೆ ಹೂಡಿದ್ದಾರೆ. ಈಗ ಅವರು ಶಾಸಕರಾಗಿದ್ದು, ನನ್ನ ವಿರುದ್ಧ ಹಕ್ಕುಚ್ಯುತಿ ಸಮಿತಿಗೆ ದೂರು ನೀಡಲಿ’ ಎಂದು ಸವಾಲು ಹಾಕಿದರು.

‘ನೈಸ್‌ ಸಂಸ್ಥೆ ರಸ್ತೆ ಹೆಸರಿನಲ್ಲಿ ಮಾಡಿರುವ ಅವ್ಯವಹಾರಗಳ ಬಗ್ಗೆ ಮಾತನಾಡಿದ್ದೇನೆ. ಇದರಿಂದ ಅವರಿಗೆ ಮಾನನಷ್ಟ ಆಗಿದೆ ಅನಿಸಿದರೆ ಹಕ್ಕುಚ್ಯುತಿ ಸಮಿತಿ ಮುಂದೆ ಹೋಗಬಹುದು. ಸಮಿತಿ ಮುಂದೆ ಹಾಜರಾಗಲು ನಾನು ಸಿದ್ಧನಾಗಿದ್ದೇನೆ’ ಎಂದರು.

ಗೌಡರು ಹೇಳಿದ ಯೋಜನೆ ಜಾರಿಗೆ: ಸಿದ್ದರಾಮಯ್ಯ
ಬೆಂಗಳೂರು: ‘ದೇವೇಗೌಡರು ಹೇಳಿದ ಯೋಜನಗಳನ್ನೇ ಅನುಷ್ಠಾನಕ್ಕೆ ತಂದರಾಯಿತು ಬಿಡಿ’ –ರಾಜ್ಯ ಸರ್ಕಾರ ಬರಿ ನಿರರ್ಥಕ ಯೋಜನೆಗಳನ್ನೇ ಜಾರಿ ಮಾಡುತ್ತಿದೆ ಎನ್ನುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದ ರಾಮಯ್ಯ ಚುಟುಕಾಗಿ ಪ್ರತಿಕ್ರಿಯಿಸಿದ ರೀತಿ ಇದು.

ನಗರದಲ್ಲಿ ಗುರುವಾರ ನಡೆದ ಜೆ.ಎಚ್‌. ಪಟೇಲರ ಸ್ಮರಣೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT