ADVERTISEMENT

ಕರ್ನಾಟಕ ಭೂ ಸುಧಾರಣೆಗಳ ಮಸೂದೆ ಅನುಮೋದನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 19:25 IST
Last Updated 9 ಜುಲೈ 2017, 19:25 IST
ಕರ್ನಾಟಕ ಭೂ ಸುಧಾರಣೆಗಳ ಮಸೂದೆ ಅನುಮೋದನೆಗೆ ಒತ್ತಾಯ
ಕರ್ನಾಟಕ ಭೂ ಸುಧಾರಣೆಗಳ ಮಸೂದೆ ಅನುಮೋದನೆಗೆ ಒತ್ತಾಯ   

ಬೆಂಗಳೂರು: ಲಂಬಾಣಿ ಹಾಗೂ ದಲಿತ ಬುಡಕಟ್ಟುಗಳ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ‘ಕರ್ನಾಟಕ ಭೂ ಸುಧಾರಣೆಗಳ ಮಸೂದೆ-2016’ಕ್ಕೆ ಶೀಘ್ರವೇ ಅಂಕಿತ ಹಾಕುವಂತೆ ಆಗ್ರಹಿಸಿ ಬಂಜಾರ ಕಾರ್ಮಿಕರ ಒಕ್ಕೂಟದ ಕಾರ್ಯಕರ್ತರು ಗೊಟ್ಟಿಕೆರೆಯ ಐಐಎಂಬಿ ಆವರಣದ ಅಂಚೆ ಕಚೇರಿಯಿಂದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಪತ್ರ ಕಳುಹಿಸಿದರು.

‘ರಾಜ್ಯ ಸರ್ಕಾರ ಸದನದಲ್ಲಿ ಈ ಮಸೂದೆಯನ್ನು ಮಂಡಿಸಿ ರಾಜ್ಯಪಾಲರಿಗೆ ಕಳುಹಿಸಿದೆ. ಆದರೆ, ರಾಜ್ಯಪಾಲರು ಆ ಮಸೂದೆಯನ್ನು ಅನುಮೋದಿಸದೆ ರಾಷ್ಟ್ರಪತಿ ಅವರಿಗೆ ಏಕೆ ಕಳುಹಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಕಳೆದರೂ ಲಂಬಾಣಿ ಸಮುದಾಯದ ಜನವಸತಿ ಪ್ರದೇಶಗಳನ್ನು ಇದುವರೆಗೂ ಕಂದಾಯ ಗ್ರಾಮಗಳಾಗಿ ಮಾರ್ಪಡಿಸಿಲ್ಲ. ಯಾರದ್ದೋ ಖಾಸಗಿ ಮಾಲೀಕತ್ವದ ಜಮೀನಿನಲ್ಲಿ, ಅರಣ್ಯ ಭೂಮಿಯಲ್ಲಿ ಹಾಗೂ ಬಗುರ್‌ಹುಕುಂ ಜಮೀನಿನಲ್ಲಿ ಅವರು ವಾಸಿಸುತ್ತಿದ್ದಾರೆ. ತಮ್ಮ ಮನೆಯ ಹಕ್ಕುಪತ್ರ ಯಾರ ಹೆಸರಿನಲ್ಲಿದೆ ಎಂಬ ಬಗ್ಗೆ ಸಮುದಾಯಗಳಿಗೆ ಮಾಹಿತಿ ಇಲ್ಲ’ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರದೀಪ್​ ರಮಾವತ್​ ತಿಳಿಸಿದರು.

ADVERTISEMENT

‘ತಾಂಡಾಗಳ ಜನರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಜನವಸತಿಗೆ ಶಾಶ್ವತ ನೆಲೆ ಇಲ್ಲದ ಕಾರಣ ಅಲೆಮಾರಿಗಳಂತೆ ತಿರುಗಾಡುತ್ತಿದ್ದಾರೆ’ ಎಂದು ಒಕ್ಕೂಟದ ಅಧ್ಯಕ್ಷ ವೆಂಕಟೇಶ್​ ಬಂಜಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.