ಬೆಂಗಳೂರು: ‘ಭಾಷೆಯ ಮೂಲಕವೇ ದೇಶಕ್ಕೆ ಕೀರ್ತಿ ತಂದುಕೊಟ್ಟವರು ನಮ್ಮ ಹಿರಿಯ ಸಾಹಿತಿಗಳು. ಅಂತವರ ಸಾಲಿನಲ್ಲಿ ಸಿದ್ಧಯ್ಯ ಪುರಾಣಿಕರು ಪ್ರಮುಖರು’ ಎಂದು ವಿದ್ವಾಂಸ ಪ್ರೊ. ಅ.ರಾ. ಮಿತ್ರ ಹೇಳಿದರು.
ಹೊಂಬಾಳೆ ಪ್ರತಿಭಾರಂಗ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ನಡೆದ ‘ಕವಿದನಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅವರು ಓದಿದ್ದು ಉರ್ದು ಭಾಷೆಯಲ್ಲಾದರೂ, ಕನ್ನಡದಲ್ಲಿ ಉತ್ಕೃಷ್ಟ ಸಾಹಿತ್ಯ ರಚಿಸಿದ್ದಾರೆ. ಬಂಗಾರದಂತಹ ವ್ಯಕ್ತಿತ್ವ ಹೊಂದಿದ್ದ ಪುರಾಣಿಕರನ್ನು ಬಂಗಾರದ ಮನುಷ್ಯ ಎಂದು ಕರೆಯಲು ಇಚ್ಛಿಸುತ್ತೆನೆ’ ಎಂದರು.
ಕನ್ನಡ ಉಪನ್ಯಾಸಕ ರುದ್ರೇಶ್ ಬಿ.ಅದರಂಗಿ ಅವರು ‘ಅಜ್ಜನ ಕೋಲಿದು ನನ್ನಯ ಕುದುರೆ’ ಮತ್ತು ‘ವಚನೋದ್ಯಾನ’ದ ಕೆಲವು ವಚನಗಳನ್ನು ವಾಚಿಸಿದರು. ಗಾಯಕ ದೇವೇಂದ್ರ ಕುಮಾರ ಪತ್ತಾರ್ ಅವರು ‘ಕರುಣೆಯೇ ಕಾಶಿ, ದಯೆಯೇ ಗಯೆ’ , ‘ಸುತ್ತಿರುವ ಸದ್ದಿನಲಿ ಸುತ್ತಲಿನ ಗದ್ದಲಲಿ’ ಸೇರಿದಂತೆ ಹಲವು ಕವಿತೆಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.