ಬೆಂಗಳೂರು: `ತ್ಯಾಜ್ಯ ಸಂಗ್ರಹದಿಂದ ಸದ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಾರ್ಯ ಕೈಗೊಳ್ಳುವವರೆಗೆ ಯಾವುದೇ ಕಾರಣಕ್ಕೂ ಮತ್ತೆ ಕಸ ಹಾಕಲು ಅವಕಾಶ ನೀಡುವುದಿಲ್ಲ~ ಎಂದು ಮಾವಳ್ಳಿಪುರದ ಗ್ರಾಮಸ್ಥರು ಮೇಯರ್ ಡಿ.ವೆಂಕಟೇಶಮೂರ್ತಿ ಅವರಿಗೆ ಸ್ಪಷ್ಟವಾಗಿ ತಿಳಿಸಿದರು.
ತಾಜ್ಯ ವಿಲೇವಾರಿ ಕುರಿತಂತೆ ಚರ್ಚಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಭಾಂಗಣದಲ್ಲಿ ಮೇಯರ್ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
`ಮಾವಳ್ಳಿಪುರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ನಿಲ್ಲಿಸಿ ಈಗಾಗಲೇ ಐದು ತಿಂಗಳಾಗಿದೆ. ಇದುವರೆಗೆ ನಾವು ಎದುರಿಸುತ್ತಿರುವ ಸಮಸ್ಯೆಗಳ ಕಡೆಗೆ ಪಾಲಿಕೆ ಕಣ್ಣೆತ್ತಿಯೂ ನೋಡಿಲ್ಲ. ಕೆಲಸ ಆರಂಭಿಸದ ಹೊರತು ನಾವು ಭರವಸೆಗಳನ್ನು ನಂಬುವುದಿಲ್ಲ~ ಎಂದು ಗ್ರಾಮಸ್ಥರು ಹೇಳಿದರು.
`ಸಂಗ್ರಹವಾದ ಕಸ ವಿಲೇವಾರಿ ಮಾಡಲು ಇದುವರೆಗೆ ಏನೂ ಕ್ರಮ ಕೈಗೊಂಡಿಲ್ಲ. ರಸ್ತೆಗಳನ್ನು ದುರಸ್ತಿ ಮಾಡಿಲ್ಲ. ಕಸದಿಂದ ಬಸಿದು ಬರುವ ಕಲ್ಮಷ ತಡೆಗಟ್ಟಿಲ್ಲ. ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ಜನ ಮತ್ತು ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಿಲ್ಲ~ ಎಂದು ದೂರಿದರು.
`ಮಂಡೂರಿನಲ್ಲಿ ಕೈಗೊಳ್ಳಲಾದ ಪರಿಹಾರ ಕಾರ್ಯಗಳನ್ನು ಮಾವಳ್ಳಿಪುರದಲ್ಲೂ ಅನುಷ್ಠಾನಕ್ಕೆ ತರಲಾಗುವುದು. ಗ್ರಾಮಸ್ಥರೊಂದಿಗೆ ಇನ್ನೊಂದು ವಾರದಲ್ಲಿ ಸಭೆ ನಡೆಸಲಾಗುವುದು. ಸಭೆಗೂ ಮುನ್ನವೇ ಕಾಮಗಾರಿ ಆರಂಭ ಮಾಡಲಾಗುವುದು. ಇದರಿಂದ ನಿಮಗೂ ನಮ್ಮ ಮೇಲೆ ಭರವಸೆ ಬರುತ್ತದೆ~ ಎಂದು ಮೇಯರ್ ಭರವಸೆ ನೀಡಿದರು.
`ಭರವಸೆಯನ್ನು ನಂಬುವ ಸ್ಥಿತಿಯಲ್ಲಿ ನಾವಿಲ್ಲ. ಪರಿಹಾರ ಕಾರ್ಯಗಳನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ~ ಎಂದು ಗ್ರಾಮಸ್ಥರು ತಿಳಿಸಿದರು.
ಮಾವಳ್ಳಿಪುರ ಮತ್ತು ಸುತ್ತಲಿನ ಗ್ರಾಮ ಪಂಚಾಯಿತಿ ಸದಸ್ಯರು, ಬಿಬಿಎಂಪಿ ಎಂಜಿನಿಯರ್ಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ತ್ಯಾಜ್ಯ ವಿಲೇವಾರಿ: ನಗರದ ತ್ಯಾಜ್ಯ ಸಾಗಾಟ ಶುಕ್ರವಾರ ಇನ್ನಷ್ಟು ಚುರುಕುಗೊಂಡಿದ್ದು, 387 ಲಾರಿಗಳಲ್ಲಿ 4,100 ಟನ್ ಕಸ ಸಾಗಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.