ADVERTISEMENT

ಕಾನ್‌ಸ್ಟೆಬಲ್‌ ಕುತ್ತಿಗೆಗೆ ಚಾಕುವಿನಿಂದ ಇರಿತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 19:35 IST
Last Updated 12 ಅಕ್ಟೋಬರ್ 2017, 19:35 IST

ಬೆಂಗಳೂರು: ಕಳ್ಳತನ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಮಹಮ್ಮದ್‌ ಅಲಿ, ತನ್ನನ್ನು ಹಿಡಿಯಲು ಬಂದ ಕಾನ್‌ಸ್ಟೆಬಲ್‌ ಅಲ್ಲಾವುದ್ದೀನ್‌ ಎಂಬುವರ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಯಶವಂತಪುರ ಸಮೀಪದ ಷರೀಫ್‌ ನಗರದಲ್ಲಿ ಬುಧವಾರ ಸಂಜೆ ನಡೆದ ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಅಲ್ಲಾವುದ್ದೀನ್‌ ಅವರನ್ನು ಎಂ.ಎಸ್‌.ರಾಮಯ್ಯ ಆಸ್ಪ ತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಠಾಣೆಯ ಪೊಲೀಸರು  ಆರೋಪಿಯನ್ನು ಪತ್ತೆ ಹಚ್ಚುತ್ತಿದ್ದಾರೆ.

‘ಷರೀಫ್‌ ನಗರದಲ್ಲಿ ವಾಸವಿರುವ ಮಹಮ್ಮದ್‌, ಯಶವಂತಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ. ಜತೆಗೆ ವಸ್ತುಗಳನ್ನು ಕದ್ದುಕೊಂಡು ಹೋಗುತ್ತಿದ್ದ. 5ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಆತ, ಕೆಲ ತಿಂಗಳಿನಿಂದ ತಲೆಮರೆಸಿಕೊಂಡಿದ್ದ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ADVERTISEMENT

‘ಆರೋಪಿ ಬಂಧನಕ್ಕೆ ಸ್ಥಳೀಯ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು. ಅದೇ ಕಾರಣಕ್ಕೆ ರೈಲು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು.

ಆತ ಷರೀಫ್‌ನಗರದ ಮನೆಗೆ ಬಂದಿದ್ದ ಮಾಹಿತಿ ತಿಳಿದ ಯಶವಂತಪುರದ ರೈಲ್ವೆ ಠಾಣೆಯ ಕಾನ್‌ಸ್ಟೆಬಲ್‌ ಅಲ್ಲಾವುದ್ದೀನ್‌ ಸೇರಿ ಮೂವರು, ಬುಧವಾರ ಸಂಜೆ 4.30 ಗಂಟೆಯ ಸುಮಾರಿಗೆ ಸ್ಥಳಕ್ಕೆ ಹೋಗಿದ್ದರು.’

‘ಪೊಲೀಸರನ್ನು ಕಂಡು ಅವರ ಮೇಲೆ ಹಲ್ಲೆ ನಡೆಸಲು ಮುಂದಾದ ಮಹಮ್ಮದ್‌, ಅಲ್ಲಾವುದ್ದೀನ್‌ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿ ದ್ದಾರೆ. ಅಲ್ಲಾವುದ್ದೀನ್‌ ಸ್ಥಳದಲ್ಲಿ ಕುಸಿದುಬೀಳುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.