ಬೆಂಗಳೂರು: ಬನಶಂಕರಿ 6ನೇ ಹಂತದ ಗಾಣಕಲ್ ಜಂಕ್ಷನ್ನಲ್ಲಿ ಬುಧವಾರ ಮಧ್ಯಾಹ್ನ ಕಾರಿಗೆ ಎಕ್ಸ್ಯುವಿ ಡಿಕ್ಕಿ ಹೊಡೆದು ದಯಾಶಂಕರ್ ರಾವ್ (69) ಎಂಬುವರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಎಕ್ಸ್ಯುವಿ ಚಾಲಕ ಮನೋಜ್ (25) ಹಾಗೂ ಅವರ ಸಂಬಂಧಿಕರ ಮಗ ಆರ್ಯನ್ ಶೆಟ್ಟಿ (12) ಗಾಯಗೊಂಡಿದ್ದಾರೆ.
ಮೈಸೂರು ರಸ್ತೆಯ ದಾಸೇಗೌಡನಕೊಪ್ಪಲು ನಿವಾಸಿಯಾದ ರಾವ್, ಬೆಳಿಗ್ಗೆ 12.30ರ ಸುಮಾರಿಗೆ ಕೆಲಸದ ನಿಮಿತ್ತ ತಮ್ಮ ಸ್ವಿಫ್ಟ್ ಕಾರಿನಲ್ಲಿ ಬನಶಂಕರಿಗೆ ಬಂದಿದ್ದರು. ಸ್ಥಳೀಯ ನಿವಾಸಿಯಾದ ಮನೋಜ್, ಅದೇ ಸಮಯದಲ್ಲಿ ಆರ್ಯನ್ನನ್ನು ಕರೆದುಕೊಂಡು ಎಕ್ಸ್ಯುವಿಯಲ್ಲಿ ಸ್ನೇಹಿತನ ಮನೆಗೆ ಹೋಗುತ್ತಿದ್ದರು.
ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಬಂದಿರುವ ಮನೋಜ್, ಜಂಕ್ಷನ್ನ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದ ಅಡ್ಡಾದಿಡ್ಡಿಯಾಗಿ ಸಾಗಿದ ಎಕ್ಸ್ಯುವಿ, ಎದುರುಗಡೆ ಬರುತ್ತಿದ್ದ ರಾವ್ ಕಾರಿಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ತಲೆಗೆ ಪೆಟ್ಟು ಬಿದ್ದು ರಾವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.