ADVERTISEMENT

‘ಕಾವ್ಯವು ಮನಸ್ಸಿನ ಕಸವನ್ನು ಗುಡಿಸುವ ಕಸಬರಿಕೆಯಾಗಲಿ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 19:47 IST
Last Updated 24 ಮಾರ್ಚ್ 2018, 19:47 IST
ಪ್ರೊ.ಎಸ್. ಜಿ. ಸಿದ್ಧರಾಮಯ್ಯ
ಪ್ರೊ.ಎಸ್. ಜಿ. ಸಿದ್ಧರಾಮಯ್ಯ   

ಬೆಂಗಳೂರು: ‘ಘನತೆಯಿಂದ ಕೂಡಿರಬೇಕಾದ ಮಾತು ಸಾರ್ವಜನಿಕವಾಗಿ ಇಂದು ಅಧೋಗತಿಗಿಳಿದಿದೆ. ಇಂತಹ ಸಂದರ್ಭದಲ್ಲಿ ಕಾವ್ಯ ಜನರ ಮನಸ್ಸಿನ ಕಸ ಗುಡಿಸುವ ಕಸಬರಿಕೆಯಾಗಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್. ಜಿ. ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ಡಾ.ಸಿದ್ಧಯ್ಯ ಪುರಾಣಿಕ ಜನ್ಮಶತಮಾನೋತ್ಸವದ ಅಂಗವಾಗಿ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಂಘವು ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವರಚಿತ ಕವನ ವಾಚನ ಸ್ಪರ್ಧೆಯನ್ನು ಉದ್ಘಾಟಿಸಿ, ‘ಮಾನವೀಯತೆಯನ್ನು ಬೆಸೆಯುವ ಕಾವ್ಯ ಮೂಡಿಬರಬೇಕು’ ಎಂದರು.

ವಿಜೇತರಿಗೆ ಬಹುಮಾನ ವಿತರಿಸಿದ ವಿಮರ್ಶಕ ಪ್ರೊ.ಎಂ.ಎಚ್.ಕೃಷ್ಣಯ್ಯ, ‘ಕವಿಯಾದವನಿಗೆ ಪ್ರತಿಭೆ ಹಾಗೂ ಶ್ರದ್ಧೆಯಿರಬೇಕು. ನೇರವಾದ ಹೇಳಿಕೆಗಳು ಕವನವಾಗುವುದಿಲ್ಲ. ಅವು ಪ್ರತಿಮೆ ಮತ್ತು ರೂಪಕಗಳಿಂದ ಕೂಡಿರಲಿ’ ಎಂದರು.

ADVERTISEMENT

ಲೇಖಕ ಪ್ರೊ.ಅ.ರಾ.ಮಿತ್ರ, ಕನ್ನಡ ಸಾಹಿತ್ಯ ಸಂವರ್ಧಕ ಟ್ರಸಿನ ಪ್ರಸನ್ನಕುಮಾರ ಪುರಾಣಿಕ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಂ.ವೆಂಕಟಶಾಮಿ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಸ್ವರಚಿತ ಕವನ ವಾಚನ ಸ್ಪರ್ಧೆಯ ವಿಜೇತರು: ಪದವಿ ವಿಭಾಗ: ಬಿಎಂಎಸ್‌ ಕಾಲೇಜಿನ ಮೀನಾಕ್ಷಿ– ಪ್ರಥಮ (₹5 ಸಾವಿರ), ಎನ್‌ಎಂಕೆಆರ್‌ವಿ ಕಾಲೇಜಿನ ಸ್ವಾತಿ ಪಂಡಿತ್‌– ದ್ವಿತೀಯ (₹3 ಸಾವಿರ), ಚಿಕ್ಕಬಳ್ಳಾಪುರ ಪ್ರಥಮದರ್ಜೆ ಕಾಲೇಜಿನ ಅಮರಾವತಿ–ತೃತೀಯ (₹2 ಸಾವಿರ).

ಸ್ನಾತಕೋತ್ತರ ವಿಭಾಗ: ವಿಜಯನಗರ ಸರ್ಕಾರಿ ಕಾಲೇಜಿನ ಜಗದೀಶ್‌– ಪ್ರಥಮ (₹5 ಸಾವಿರ), ಸರ್ಕಾರಿ ಕಲಾ ಕಾಲೇಜಿನ ಸಿದ್ಧರಾಜು–ದ್ವಿತೀಯ (₹3 ಸಾವಿರ), ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಮಹಾಂತೇಶ್‌– ತೃತೀಯ (₹2 ಸಾವಿರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.