ADVERTISEMENT

ಕೆ.ಆರ್.ಪುರ: ಮರದ ಕೆಳಗೆ ಪಾಠ!

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 19:30 IST
Last Updated 10 ಜೂನ್ 2011, 19:30 IST
ಕೆ.ಆರ್.ಪುರ: ಮರದ ಕೆಳಗೆ ಪಾಠ!
ಕೆ.ಆರ್.ಪುರ: ಮರದ ಕೆಳಗೆ ಪಾಠ!   

ಕೃಷ್ಣರಾಜಪುರ: ಇಲ್ಲಿನ ವಾರ್ಡ್ 26ರ ಅಂಬೇಡ್ಕರ್ ಬಡಾವಣೆಯಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ 2008-09ರಲ್ಲಿಯೇ ಶಿಕ್ಷಣ ಇಲಾಖೆ ಆದೇಶ ನೀಡಿದ್ದು, ಹಣವೂ ಮಂಜೂರಾಗಿದೆ. ಆದರೆ, ಇದುವರೆಗೆ ಆದೇಶ ಜಾರಿಗೆ ಬಾರದ ಕಾರಣ ಪ್ರೌಢಶಾಲೆಯ 8, 9 ಮತ್ತು 10ನೇ ತರಗತಿಗಳು ಸಮುದಾಯ ಭವನದ ಆವರಣದಲ್ಲಿರುವ ಅರಳಿ ಮರದ ಕೆಳಗೆ ನಡೆಯುತ್ತಿವೆ.

ಇದು ಪೋಷಕರು ಹಾಗೂ ವಿದ್ಯಾರ್ಥಿಗಳ ಅಸಮಾಧಾನಕ್ಕೂ ಎಡೆ ಮಾಡಿಕೊಟ್ಟಿದೆ. ಮೂರು ತರಗತಿಗಳು ಒಟ್ಟಿಗೆ ನಡೆಯುತ್ತಿದ್ದು, ಏಕಾಗ್ರತೆಗೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

`ಶಾಲೆಯಲ್ಲಿ ಶೌಚಾಲಯವಿಲ್ಲ, ಕುಡಿಯುವ ನೀರಿಲ್ಲ, ಆಟದ ಮೈದಾನವಿಲ್ಲ, ಪೀಠೋಪಕರಣಗಳಿಲ್ಲ. ಈ ಅವ್ಯವಸ್ಥೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆದರೆ, ನಾವು ಶಾಲೆಯಿಂದ ನಿರ್ಗಮಿಸುವ ವೇಳೆಗೆ ಪರಿಹಾರ ದೊರೆಯಬಹುದೇನೋ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ~ ಎಂದು ಹೆಸರೇಳಲು ಇಚ್ಛಿಸದ ವಿದ್ಯಾರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

 `ನಮ್ಮ  ಭವಿಷ್ಯ ರೂಪುಗೊಳ್ಳಲು 10ನೇ ತರಗತಿ ಒಂದು ತಿರುವು ಎಂದು ಭಾವಿಸಿದ್ದೇವೆ. ನಾವು ಕೂಡ ಕಾನ್ವೆಂಟ್ ವಿದ್ಯಾರ್ಥಿಗಳ ರೀತಿ ಓದಿ ಮುಂದೆ ಬರಬೇಕೆ ನ್ನುವ ಆಸೆ ಇದೆ. ಆದರೆ, ಅವೆಲ್ಲವೂ ಗಗನ ಕುಸುಮವಾಗಿದೆ. ಕಲಿಕೆ ಬಗ್ಗೆ ನಾವು ಪೋಷಕರಿಗೆ ಏನು ಉತ್ತರ ನೀಡಬೇಕೋ ತಿಳಿಯದು. ಮೋರಿ ನೀರಿನ ದುರ್ವಾಸನೆ, ಸ್ಥಳದ ಕೊರತೆ ಜತೆಗೆ ಅನಾರೋಗ್ಯ ಪರಿಸರದಲ್ಲಿ ಕಲಿಕೆ ಹೇಗೆ?~ ಎಂದು ಅವರು ಪ್ರಶ್ನಿಸಿದರು.

`ಸಮಸ್ಯೆ ಬಗ್ಗೆ ಈಗಾಗಲೇ ಅಧಿಕಾರಿ ಗಳ ಗಮನ ಸೆಳೆದಿದ್ದೇವೆ. ಒಟ್ಟಾರೆ, ಶಾಲೆ ಯಲ್ಲಿ 180 ಮಕ್ಕಳಿದ್ದಾರೆ. ಎಂಟನೇ ತರಗತಿಗೆ ಇನ್ನೂ ಪ್ರವೇಶ ನಡೆಯುತ್ತಿದೆ. ತರಗತಿ ಸಮಸ್ಯೆಗೆ ಏನು ಪರಿಹಾರ ಕಂಡು ಕೊಳ್ಳಲು ನಮಗೆ ದಿಕ್ಕೇ ತೋಚದಂತಾ ಗಿದೆ~ ಎಂದು ಶಿಕ್ಷಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.