ಕೃಷ್ಣರಾಜಪುರ: `ಕೃಷ್ಣರಾಜಪುರ ಮತ್ತಿತರ ಕಡೆಗಳಿಂದ ಮಾರತ್ಹಳ್ಳಿ, ಐಟಿಪಿಎಲ್, ಹೂಡಿ, ಹೊರವರ್ತುಲ ರಸ್ತೆ ಸಂಪರ್ಕಿಸಲು ಮತ್ತು ಕೇಂದ್ರ ನಿಲ್ದಾಣಗಳಿಗೆ ತೆರಳಲು ಕೆ.ಆರ್.ಪುರ ರೈಲ್ವೆ ಕೆಳಸೇತುವೆ ಸುರಂಗ ಮಾರ್ಗವನ್ನು ಬಳಸಬೇಕಾಗಿದೆ. ಈ ಮಾರ್ಗ ಇಕ್ಕಟ್ಟಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ' ಎಂದು ದ್ವಿಚಕ್ರ ವಾಹನ ಸವಾರರು ಅಳಲು ತೋಡಿಕೊಂಡಿದ್ದಾರೆ.
`ಮಳೆ ಬಂದಾಗ ಸುರಂಗ ಮಾರ್ಗದ ಒಳಗೆ ಹಾಗೂ ಹೊರಗೆ ನೀರು ನಿಂತಿರುತ್ತದೆ. ನಿತ್ಯ ಸುಮಾರು 10 ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನ ಸವಾರರು ಸುರಂಗ ಮಾರ್ಗದಲ್ಲಿ ತೆರಳುತ್ತಾರೆ. ಸಂಚಾರಕ್ಕೆ ಪರದಾಡಬೇಕಿದೆ. ಸ್ವಲ್ಪ ಆಯ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ' ಎಂದು ಬೈಕ್ ಸವಾರ ಶಂಕರ್ ಅಳಲು ತೋಡಿಕೊಂಡರು.
`ಸುರಂಗ ಮಾರ್ಗ ಬಿಟ್ಟರೆ ಪರ್ಯಾಯ ರಸ್ತೆಗಳಿಲ್ಲ. ಪರ್ಯಾಯವಾಗಿ ತೂಗು ಸೇತುವೆ ಮೂಲಕ 5 ಅಥವಾ 6 ಕಿ.ಮೀ ದೂರ ಬಳಸಿಕೊಂಡು ವರ್ತುಲ ರಸ್ತೆಗೆ ಸೇರಬೇಕು. ಬಿಬಿಎಂಪಿ ಹಾಗೂ ರೈಲ್ವೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ' ಎಂದು ಸವಾರ ಮುನಿಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.