ADVERTISEMENT

ಕೆಸಿಐಸಿ: ಟೆಂಡರ್‌ ರದ್ದತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:33 IST
Last Updated 13 ಮಾರ್ಚ್ 2014, 19:33 IST

ಬೆಂಗಳೂರು: ‘ತೋಟಗಾರಿಕೆ ಇಲಾಖೆಯ  ‘ಸುವರ್ಣ ಕರ್ನಾಟಕ ಉದ್ಯಾನಗಳ ಪ್ರತಿಷ್ಠಾನ’ದ ವತಿಯಿಂದ ಲಾಲ್‌ಬಾಗ್‌ನಲ್ಲಿ ಪ್ರವಾಸಿಗರಿಂದ ಪ್ರವೇಶ ಶುಲ್ಕ ಸಂಗ್ರಹಿಸಲು ಸಮರ್ಪಕ ದಾಖಲೆಗಳನ್ನು ಸಲ್ಲಿಸದ  ಕೆ.ಸಿ.ಐ.ಸಿ.  ಪ್ರೈವೇಟ್ ಲಿಮಿಟೆಡ್‌ ಎಂಬ ಸಂಸ್ಥೆಗೆ ಟೆಂಡರ್‌ ನೀಡಲಾಗಿದ್ದು, ಇದನ್ನು ಕೂಡಲೆ ರದ್ದುಪಡಿಸಬೇಕು’ ಎಂದು ಎಚ್‌.ಕೆ.ಎಸ್‌.ಸರ್ವೀಸಸ್‌ ಸಂಸ್ಥೆಯ ವ್ಯವಸ್ಥಾಪಕ  ಪಾಲುದಾರ ಎಚ್.ಕೆ.ಹನುಮಂತರಾಜು  ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಸಂಸ್ಥೆಯು ತಾಂತ್ರಿಕ ಬಿಡ್‌ಗೆ ಅರ್ಹತೆ ಪಡೆಯಲು ಟೆಂಡರ್‌ಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ 2 ವರ್ಷಗಳ ಕಾರ್ಯನಿರ್ವಹಣೆಯ ಅರ್ಹತಾ ಪತ್ರವನ್ನು ಲಗತ್ತಿಸಿರಬೇಕು. ಆದರೆ, ಯಾವುದೇ ಅರ್ಹತಾ ದೃಢೀಕರಣ ಪತ್ರ ಲಗತ್ತಿಸದಿದ್ದರೂ ಕೆ.ಸಿ.ಐ.ಸಿ. ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ ಟೆಂಡರ್‌ ನೀಡಲಾಗಿದೆ ಎಂದು ದೂರಿದರು.

‘ಸುವರ್ಣ ಕರ್ನಾಟಕ ಉದ್ಯಾನಗಳ ಪ್ರತಿಷ್ಠಾನವು   2014–15ನೇ ಸಾಲಿನ ಅವಧಿಗೆ ಪ್ರವೇಶ ಶುಲ್ಕ ಸಂಗ್ರಹಿಸಲು ಕರೆದಿದ್ದ ಟೆಂಡರ್‌ಗೆ ನಮ್ಮ ಸಂಸ್ಥೆಯ ವತಿಯಿಂದ ಅರ್ಜಿ ಸಲ್ಲಿಸಿ ₨1.90 ಕೋಟಿ ಪಾವತಿಸುತ್ತೇವೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಕೆಸಿಐಸಿ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ ಕೇವಲ ₨1.70 ಕೋಟಿಗೆ ಈ ಟೆಂಡರ್‌ನ್ನು ನೀಡಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ₨20 ಲಕ್ಷ ನಷ್ಟವಾಗಿದೆ.

 ಇದರಲ್ಲಿ ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಿ.ಎಲ್‌. ಮಹೇಶ್ವರ್‌ ಮತ್ತು ಅಧಿಕಾರಿಗಳ ಕೈವಾಡವಿದೆ’ ಎಂದು ಅವರು ಆರೋಪಿಸಿದರು. ಕೆ.ಸಿ.ಐ.ಸಿ. ಸಂಸ್ಥೆಗೆ ನೀಡಿರುವ ಟೆಂಡರ್‌ನ್ನು ರದ್ದುಪಡಿಸಿ ಹೊಸ ಟೆಂಡರ್ ಕರೆಯಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.