ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿ ಹಾಗೂ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಜೈಲಿನ ಹೊರಗಡೆ ಜತೆಗೆ ತೆಗೆಸಿಕೊಂಡ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾಫ್ಟ್ವೇರ್ ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣದ ಅಪರಾಧಿ ಕ್ಯಾಬ್ ಚಾಲಕ ಶಿವಕುಮಾರ್ ಹಾಗೂ ಕಾರಾಗೃಹದ ಭದ್ರತೆಗೆ ನಿಯೋಜನೆಗೊಂಡಿರುವ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಫೋಟೊದಲ್ಲಿರುವವರು.
ಅನಾರೋಗ್ಯದ ನೆಪದಲ್ಲಿ ಶಿವಕುಮಾರ್ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗುತ್ತಿದ್ದ. ಅದೇ ಸಮಯದಲ್ಲಿ ಆ ಮಹಿಳಾ ಸಿಬ್ಬಂದಿಯನ್ನು ಅಲ್ಲಿಗೆ ಕರೆಸಿಕೊಳ್ಳುತ್ತಿದ್ದ. ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೊಲೀಸರ ಕಣ್ತಪ್ಪಿಸಿ ನಗರದೆಲ್ಲೆಡೆ ಅವರಿಬ್ಬರೂ ಸುತ್ತಾಡುತ್ತಿದ್ದರು. ಸುತ್ತಾಟದ ವೇಳೆ ಆ ಮಹಿಳೆ ತನ್ನ ಮೊಬೈಲ್ನಲ್ಲಿ ಸೆಲ್ಫಿ ತೆಗೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಹೋದ್ಯೋಗಿಯೊಬ್ಬರು ಮಹಿಳಾ ಸಿಬ್ಬಂದಿಯ ಮೊಬೈಲ್ ಪರಿಶೀಲಿಸುವಾಗ ಆ ಫೋಟೊ ಕಾಣಿಸಿದೆ. ಅದನ್ನು ತನ್ನ ಮೊಬೈಲ್ಗೆ ಕಳುಹಿಸಿಕೊಂಡ ಅವರು ಅದನ್ನು ಜೈಲಿನ ಇತರ ಸಿಬ್ಬಂದಿಗೂ ಕಳುಹಿಸಿದ್ದರು. ಅದೇ ಫೋಟೊ ವೈರಲ್ ಆಗಿದೆ ಎನ್ನಲಾಗಿದೆ.
ಫೋಟೊ ಬಗ್ಗೆ ಗೊತ್ತಿಲ್ಲ:
‘ಈ ಫೋಟೊ ಬಗ್ಗೆ ಮಾಹಿತಿ ಇಲ್ಲ. ಅವರಿಬ್ಬರೂ ಹೊರಗಡೆ ಸುತ್ತಾಡಿರುವುದು ನಿಜವಾಗಿದ್ದರೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕ ಸೋಮಶೇಖರ್ ತಿಳಿಸಿದ್ದಾರೆ.
‘ಮುಖ್ಯ ಅಧೀಕ್ಷಕನಾಗಿ ಮೂರು ತಿಂಗಳ ಹಿಂದಷ್ಟೇ ನೇಮಕಗೊಂಡಿದ್ದೇನೆ. ಅಧಿಕಾರ ಸ್ವೀಕರಿಸಿದ ದಿನದಿಂದಲೂ ಇಲ್ಲಿಯವರೆಗೂ ಶಿವಕುಮಾರ್ನನ್ನು ಕಾರಾಗೃಹದಿಂದ ಹೊರಗೆ ಕಳುಹಿಸಿಲ್ಲ. ಈ ಚಿತ್ರ ಮೂರು ತಿಂಗಳ ಹಿಂದಿನದ್ದಿರಬಹುದು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.