ಬೆಂಗಳೂರು: ನಗರದಲ್ಲಿ ಇನ್ನುಮುಂದೆ ಕೊಳವೆ ಬಾವಿಗಳನ್ನು ಕೊರೆಸಬೇಕಾದರೆ ಕಡ್ಡಾಯವಾಗಿ ಬೆಂಗಳೂರು ಜಲ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಒಪ್ಪಿಗೆ ಪಡೆಯಬೇಕು. ಅನುಮತಿ ಪಡೆಯದ ಕೊಳವೆಬಾವಿಗೆ ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡುವುದಿಲ್ಲ ಎಂದು ಮಂಡಳಿ ಅಧ್ಯಕ್ಷ ಗೌರವ್ ಗುಪ್ತಾ ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಬಿಡಬ್ಲ್ಯುಎಸ್ಎಸ್ಬಿ ಕಂದಾಯ ಬೇಡಿಕೆ, ವಸೂಲಾತಿ ಮತ್ತು ಬಾಕಿ ಪರಿಶೀಲನಾ ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. `ಈಗಾಗಲೇ ಕೊಳವೆ ಬಾವಿ ಕೊರೆಸಿದವರು 120 ದಿನಗಳ ಒಳಗೆ ಮಂಡಳಿಯಲ್ಲಿ ನೋಂದಣಿ ಮಾಡಿಸಬೇಕು' ಎಂದು ಸೂಚಿಸಿದರು.
ನಗರಕ್ಕೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಲ್ಲಿ ನೀರಿನ ಸಂಪರ್ಕ ಕಾರ್ಯ ಮಂದಗತಿಯಲ್ಲಿ ನಡೆದಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, `ಮೀಟರ್ ಮೂಲಕವೇ ನೀರು ಪೂರೈಕೆಯಾಗಬೇಕು ಎಂಬುದು ಮಂಡಳಿ ಆಶಯವಾಗಿದೆ' ಎಂದು ಹೇಳಿದರು.
`ಮೀಟರ್ ಅಳವಡಿಕೆ ಕಾರ್ಯ ತೀವ್ರಗೊಳಿಸುವ ನಿಟ್ಟಿನಲ್ಲಿ ಪ್ರತಿ ಮೀಟರ್ ರೀಡರ್ಗೆ 2500 ಕಟ್ಟಡಗಳ ಗುರಿ ನೀಡಬೇಕು. ಅವರಿಗೆ ನಿಗದಿಪಡಿಸುವ ಸ್ಥಳದಲ್ಲಿ ಅನಧಿಕೃತ ಸಂಪರ್ಕ ಕಂಡುಬಂದಲ್ಲಿ ಅದಕ್ಕೆ ಅವರನ್ನೇ ಹೊಣೆ ಮಾಡಬೇಕು' ಎಂದು ಪ್ರಧಾನ ಎಂಜಿನಿಯರ್ ವೆಂಕಟರಾಜು ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.