ಬೆಂಗಳೂರು: ಕೋದಂಡ ರಾಮಸ್ವಾಮಿ ಬ್ರಹ್ಮರಥೋತ್ಸವವು ವೈಟ್ಫೀಲ್ಡ್ ಬಳಿಯ ಕಾಡುಗೋಡಿಯಲ್ಲಿ ಇತ್ತೀಚೆಗೆವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ ಪೂಜಾ ಕೈಂಕರ್ಯಗಳು ನಡೆದವು. ಪ್ರಮುಖ ಬೀದಿಗಳಲ್ಲಿ ಸಾಗಿದ ರಥೋತ್ಸವದ ತೇರಿಗೆ ಏಲಕ್ಕಿ ಬಾಳೇಹಣ್ಣುಗಳನ್ನು ಎಸೆದ ಭಕ್ತರು ತಮ್ಮ ಹರಕೆ ತೀರಿಸಿದರು.
ನಾಗೊಂಡನಹಳ್ಳಿ, ಚನ್ನಸಂದ್ರ, ಕಾಡುಗೋಡಿ, ದಿನ್ನೂರು, ಬೆಳ್ತೂರು, ಸೀಗೆಹಳ್ಳಿ, ಇಮ್ಮಡಿಹಳ್ಳಿ, ಹೋಪ್ಫಾರ್ಮ್ ಹಾಗೂ ಸುತ್ತಮುತ್ತಲ ಪ್ರದೇಶದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಅನ್ನದಾನವನ್ನು ಏರ್ಪಡಿಸಲಾಗಿತ್ತು.
ತಮಟೆ, ಪೂಜಾ ಕುಣಿತ, ಗೊರವನ ಕುಣಿತ, ಚಿಂಗಾರಿ ಮೇಳ, ಚಂಡಿ ಮೇಳ, ಚಟ್ಟಿ ಮೇಳ, ವೀರಗಾಸೆ ಹಾಗೂ ಗಾರುಡಿ ಗೊಂಬೆ ಕುಣಿತವು ಭಕ್ತರ ಮನಸೆಳೆದವು.
ರಥೋತ್ಸವಕ್ಕೆ ಚಾಲನೆ ನೀಡಿದ ದೇವಾಲಯದ ಧರ್ಮದರ್ಶಿ ಕೆ.ಎನ್.ಅಶ್ವತ್ಥ್ ನಾರಾಯಣರೆಡ್ಡಿ, ‘ರಾಜ್ಯದಲ್ಲಿ ಸಕಾಲಕ್ಕೆ ಮಳೆ–ಬೆಳೆಯಾಗಿ ರೈತರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಬ್ರಹ್ಮರಥೋತ್ಸವ ಆಚರಿಸಲಾಗುತ್ತದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.