ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಾನುಕುಂಟೆ ಸಮೀಪದ ಅದ್ದೆ ಗ್ರಾಮದಲ್ಲಿ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿ ರಾಜಣ್ಣ (35) ಮತ್ತು ಅವರ ಪತ್ನಿ ಮಂಜುಳಾ (26) ಆತ್ಮಹತ್ಯೆ ಮಾಡಿಕೊಂಡವರು. ವಿವಾಹವಾಗಿ ಆರು ವರ್ಷವಾಗಿದ್ದ ದಂಪತಿಗೆ ವಿನಯ್ ಮತ್ತು ಮೌನಶ್ರೀ ಎಂಬ ಮಕ್ಕಳಿದ್ದಾರೆ.
ಅಣ್ಣನ ಪತ್ನಿಗೆ ಎರಡು ದಿನಗಳ ಹಿಂದೆಯಷ್ಟೇ ಮಗು ಜನಿಸಿತ್ತು. ಮಂಜುಳಾ ಅವರು, ಅಣ್ಣನ ಮಗು ವನ್ನು ನೋಡಲು ಆಂಧ್ರಪ್ರದೇಶದ ತವರು ಮನೆಗೆ ಹೋಗುವುದಾಗಿ ಭಾನುವಾರ ಸಂಜೆ ಪತಿಗೆ ತಿಳಿಸಿದರು.
ಆದರೆ, ರಾಜಣ್ಣ ಅವರ ಸಂಬಂಧಿಕರೊಬ್ಬರ ಮದುವೆ ಸಮಾರಂಭ ಬುಧವಾರ (ಏ.25) ಏರ್ಪಡಾಗಿತ್ತು. ಈ ಹಿನ್ನೆಲೆಯಲ್ಲಿ ಸಮಾರಂಭ ಮುಗಿದ ಬಳಿಕ ತವರು ಮನೆಗೆ ಹೋಗುವಂತೆ ಪತ್ನಿಗೆ ಸೂಚಿಸಿದರು.
ಈ ವಿಷಯವಾಗಿ ದಂಪತಿ ಮಧ್ಯೆ ವಾಗ್ವಾದ ನಡೆದು ಜಗಳವಾಯಿತು. ಇದರಿಂದ ಬೇಸರಗೊಂಡ ಮಂಜುಳಾ ಅವರು ಕೋಣೆಯೊಂದರಲ್ಲಿ ರಾತ್ರಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪತ್ನಿಯ ಆತ್ಮಹತ್ಯೆ ಸುದ್ದಿ ತಿಳಿದು ಮನನೊಂದ ರಾಜಣ್ಣ ಅವರು ಸೋಮವಾರ ಬೆಳಗಿನ ಜಾವ ಮನೆಯಿಂದ ಹೊರ ಹೋಗಿ ತೋಟವೊಂದರಲ್ಲಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
`ನನ್ನ ಸಾವಿಗೆ ಯಾರು ಕಾರಣರಲ್ಲ. ಪತ್ನಿಯ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.
ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ~ ಎಂದು ರಾಜಣ್ಣ ಪತ್ರ ಬರೆದಿಟ್ಟಿದ್ದಾರೆ. ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ದಂಪತಿಯ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.