ADVERTISEMENT

ಕ್ರಿಮಿನಾಶಕ ಕುಡಿದು ಮಹಿಳೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 19:46 IST
Last Updated 7 ಜೂನ್ 2013, 19:46 IST

ಬೆಂಗಳೂರು: ನಂದಿನಿಲೇಔಟ್ ಸಮೀಪದ ಜಯಮಾರುತಿನಗರದಲ್ಲಿ ಗುರುವಾರ ಮಂಜುಳಾ (30) ಎಂಬುವರು ಅಮೋನಿಯಂ ಫಾಸ್ಪೇಟ್ ಎಂಬ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಾಸರಹಳ್ಳಿಯವರಾದ ಮಂಜುಳಾ ಆರು ವರ್ಷಗಳ ಹಿಂದೆ ರಾಮಚಂದ್ರ ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಗುರುವಾರ ಸಂಜೆ ಅವರು ಮನೆಯಲ್ಲೇ ಕ್ರಿಮಿನಾಶಕ ಕುಡಿದಿದ್ದಾರೆ.

ಇದರಿಂದ ಅಸ್ವಸ್ಥಗೊಂಡ ಅವರನ್ನು ಸಮೀಪದ ಸುಗುಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು, ರಾತ್ರಿ 2.30ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಪೊಲೀಸರು ಮಾಹಿತಿ ನೀಡಿದರು.
ರಾಮಚಂದ್ರ ಅವರು ಮನೆ ಸಮೀಪವೇ ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಅವರು, ನೆಲಮಂಗಲದಲ್ಲಿರುವ ತಮ್ಮ ಹೊಲಕ್ಕೆ ಹೋಗಿದ್ದರು. ಮಗಳು, ದಾಸರಹಳ್ಳಿಯಲ್ಲಿರುವ ಅಜ್ಜಿಯ ಮನೆಯಲ್ಲಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್ ಕಳೆದುಕೊಂಡಿದ್ದಳು: `ಪತ್ನಿ ವಾರದ ಹಿಂದಷ್ಟೆ ್ಙ18,000 ನಗದು ಕಳೆದುಕೊಂಡಿದ್ದಳು. ಅಲ್ಲದೇ, ಮೂರು ದಿನಗಳ ಹಿಂದೆ ತಾಯಿ ಮನೆಗೆ ಹೋಗಿದ್ದ ಆಕೆ, ಅಲ್ಲಿ ಕೂಡ  ್ಙ22,000 ಬೆಲೆ ಬಾಳುವ ಮೊಬೈಲ್ ಕಳೆದುಕೊಂಡಿದ್ದಳು' ಎಂದು ರಾಮಚಂದ್ರ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ.

ತವರು ಮನೆಯಿಂದ ಗುರುವಾರ ಮಧ್ಯಾಹ್ನ ಮನೆಗೆ ಬಂದ ಪತ್ನಿ, ಸಂಜೆ 5.30ರ ಸುಮಾರಿಗೆ ಮೊಬೈಲ್‌ಗೆ ಕರೆ ಮಾಡಿದಳು. ಹಣ ಮತ್ತು ಮೊಬೈಲ್ ಕಳೆದುಕೊಂಡು ಬೇಸರವಾಗಿದೆ. ಇದರಿಂದ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದಳು. ಮನೆಗೆ ವಾಪಸ್ ಬರುವ ವೇಳೆಗಾಗಲೇ ಪತ್ನಿ ಅಸ್ವಸ್ಥಳಾಗಿ ಬಿದ್ದಿದ್ದಳು ಎಂದು ಅವರು ಹೇಳಿದ್ದಾರೆ.

`ಅಳಿಯ-ಮಗಳು ಅನ್ಯೋನ್ಯವಾಗಿದ್ದರು. ದುಡುಕಿ ಇಂತಹ ನಿರ್ಧಾರಕ್ಕೆ ಬಂದಿದ್ದಾಳೆ' ಎಂದು ಮಂಜುಳಾ ಪೋಷಕರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಕಚೇರಿಯಲ್ಲೇ ಆತ್ಮಹತ್ಯೆ
ಜಯನಗರ ಏಳನೇ ಬ್ಲಾಕ್‌ನಲ್ಲಿರುವ ಕೆನರಾ ಡಯಾಗ್ನಿಸ್ಟಿಕ್ ಸೆಂಟರ್‌ನ ಕಚೇರಿಯಲ್ಲಿ ಗುರುವಾರ ರಾತ್ರಿ ರಾಘವೇಂದ್ರ (22) ಎಂಬ ಸೆಕ್ಯುರಿಟಿ ಗಾರ್ಡ್ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಮೂಲತಃ ಕುಂದಾಪುರದ ಗಂಗೊಳ್ಳಿಯವರಾದ ಮಂಜುನಾಥ್ ಮತ್ತು ಶಾರದಾ ದಂಪತಿಯ ಮಗನಾದ ರಾಘವೇಂದ್ರ, ಮೂರು ವರ್ಷಗಳಿಂದ ಕೆನರಾ ಡಯಾಗ್ನಿಸ್ಟಿಕ್ ಸೆಂಟರ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ ಪಾಳಿ ಕೆಲಸ ಇದ್ದ ಕಾರಣ, ಎಂಟು ಗಂಟೆ ಸುಮಾರಿಗೆ ಕರ್ತವ್ಯಕ್ಕೆ ಬಂದಿದ್ದ ರಾಘವೇಂದ್ರ, ಕಚೇರಿಯಲ್ಲೇ ನೇಣು ಹಾಕಿಕೊಂಡಿದ್ದಾರೆ.

ಶುಕ್ರವಾರ ಬೆಳಿಗಿನ ಪಾಳಿಯ ಸೆಕ್ಯುರಿಟಿ ಗಾರ್ಡ್ ಕಚೇರಿಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ  ಎಂದು ಪೊಲೀಸರು ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.